
ಕುಷ್ಟಗಿ: ಕಾಲ ಬದಲಾಗುತ್ತಿದ್ದಂತೆ ಪರಿಸರದಲ್ಲಿನ ಸಹಜ ಪಕ್ಷಿಸಂಕುಲಗಳಲ್ಲಿ ಒಂದಾಗಿರುವ ಗುಬ್ಬಚ್ಚಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಇಳಿಮುಖವಾಗುತ್ತಿದ್ದು ಪರಿಸರ ಸಮತೋಲನಕ್ಕೆ ಗುಬ್ಬಿಗಳ ಸಂತತಿ ಹೆಚ್ಚಳ ಅಗತ್ಯ ಎಂದು ಸುಜಲಾನ್ ಫೌಂಡೇಶನ್ ವ್ಯವಸ್ಥಾಪಕ ಅಜಿತ್ ಪಾಟೀಲ ಹೇಳಿದರು.
ತಾಲ್ಲೂಕಿನ ಕ್ಯಾದಿಗುಪ್ಪಾ ಸರ್ಕಾರಿ ಪ್ರೌಢಶಾಲೆಯ ಪರಿಸರ ಸಂಘ, ಆರ್ಡರ್ ಮತ್ತು ನೀಡ್ಸ್ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ಗುಬ್ಬಿಗಳ ಸಂರಕ್ಷಣಾ ಅಭಿಯಾನದಲ್ಲಿ ಮಾತನಾಡಿದ ಅವರು, ‘ಗುಬ್ಬಚ್ಚಿಗಳ ಸಂತತಿ ಬೆಳೆಸುವುದಕ್ಕೆ ಪೂರಕ ಅವಕಾಶಗಳನ್ನು ಕಲ್ಪಿಸಬೇಕಾಗುತ್ತದೆ. ಪರಿಸರದ ಸಹಜ ಸೌಂದರ್ಯದಲ್ಲಿ ಗುಬ್ಬಿಗಳ ಪಾತ್ರವೂ ಬಹುಮುಖ್ಯವಾಗಿರುತ್ತದೆ. ಹಾಗಾಗಿ ಈ ವಿಷಯದಲ್ಲಿ ಜನರಲ್ಲಿ ಅರಿವು ಹೆಚ್ಚಿಸುವ ಅಗತ್ಯವಿದೆ’ ಎಂದರು.
ನೀಡ್ ಸಂಸ್ಥೆಯ ಉಳವಪ್ಪ, ಆರ್ಡರ್ ಸಂಸ್ಥೆಯ ಮಂಜುನಾಥ, ಮುಖ್ಯಶಿಕ್ಷಕ ರಾಜೇಂದ್ರ ಸಿನ್ನೂರ, ಶಿಕ್ಷಕರಾದ ಬಸವರಾಜ ವಾಲಿಕಾರ ಮಾತನಾಡಿದರು. ಹನುಮಂತ ರಾಯಬಾಗಿ, ಗೀತಾ ದೇವಾಂಗಮಠ, ಮಹಾಂತೇಶ ಹೊಸಮನಿ, ಎಸ್.ಎಸ್.ಅಂಗಡಿ, ಪ್ರಶಿಕ್ಷಣಾರ್ಥಿಗಳಾದ ಸಂಗಮೇಶ ಗೂಳಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಇದೇ ಸಂದರ್ಭದಲ್ಲಿ ಗುಬ್ಬಿಗಳನ್ನು ಸಂರಕ್ಷಿಸುವುದಕ್ಕೆ ಅಗತ್ಯವಾದ ಗುಬ್ಬಚ್ಚಿಯ ಗೂಡುಗಳನ್ನು ಎಲ್ಲ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.