ಕೊಪ್ಪಳ ಬಲ್ಡೋಟಾ ಉಕ್ಕಿನ ಕಾರ್ಖಾನೆ ಭದ್ರತಾ ಸಿಬ್ಬಂದಿಯಿಂದ ಕುರಿಗಾಯಿ ಮೇಲೆ ಹಲ್ಲೆ
ಕೊಪ್ಪಳ: ಜಿಲ್ಲಾಕೇಂದ್ರದ ಸಮೀಪದಲ್ಲಿ ಬಲ್ಡೋಟಾ ಕಂಪನಿ ತನ್ನ ಉಕ್ಕಿನ ಕಾರ್ಖಾನೆ ವಿಸ್ತರಿಸಲು ಕಾಂಪೌಂಡ್ ಹಾಕಿಕೊಂಡಿರುವ ಆವರಣದಲ್ಲಿ ಬಸಾಪುರ ಕೆರೆಯಿದ್ದು, ಅಲ್ಲಿ ಕುರಿಗಳನ್ನು ಕರೆದುಕೊಂಡು ನೀರು ಕುಡಿಸಲು ಹೋದ ಕುರಿಗಾಹಿ ಮೇಲೆ ಕಂಪನಿಯ ಭದ್ರತಾ ಸಿಬ್ಬಂದಿ ಶುಕ್ರವಾರ ಹಲ್ಲೆ ಮಾಡಿದ್ದಾರೆ.
ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು, ಜಾನುವಾರುಗಳು ನೀರು ಕುಡಿಯಲು ಅವಕಾಶ ಮಾಡಿಕೊಡಬೇಕು ಎಂದು ಕೊಪ್ಪಳ ಬಚಾವೊ ಜನಾಂದೋಲನ ಸಮಿತಿ ವತಿಯಿಂದ ಎರಡು ದಿನಗಳ ಹಿಂದೆ ಪ್ರತಿಭಟನೆ ನಡೆದಿತ್ತು. ಆಗ ಕುರಿಗಳನ್ನು ಕಾರ್ಖಾನೆಯ ಆವರಣದೊಳಗೆ ನುಗ್ಗಿಸಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಇದಕ್ಕೆ ಒಂಬತ್ತು ಜನ ಹೋರಾಟಗಾರರ ಮೇಲೆ ಪ್ರಕರಣ ದಾಖಲಾಗಿದೆ.
ಹೋರಾಟದ ಭಾಗವಾಗಿ ಶುಕ್ರವಾರ ಬೆಳಿಗ್ಗೆ ಬಸಾಪುರ ಗ್ರಾಮದ ಕುರಿಗಾಯಿ ದೇವಪ್ಪ ಹಾಲಹಳ್ಳಿ ಕುರಿಗಳಿಗೆ ನೀರು ಕುಡಿಸಲು ಕೆರೆಯ ಬಳಿ ಹೋದಾಗ ಬಲ್ಡೋಟಾ ಕಂಪನಿಯ ಭದ್ರತಾ ಸಿಬ್ಬಂದಿ ಮನಬಂದಂತೆ ಹಲ್ಲೆ ಮಾಡಿದ ವಿಡಿಯೊಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ಚಿಕಿತ್ಸೆಗಾಗಿ ದೇವಪ್ಪನನ್ನು ಜಿಲ್ಲಾಸ್ಪತ್ರೆ ದಾಖಲಿಸಲಾಗಿದೆ.
ಹಲ್ಲೆ ವಿಷಯ ತಿಳಿದು ಹೋರಾಟಗಾರರು ಕಾರ್ಖಾನೆ ಬಳಿ ಹೋದಾಗ ಭದ್ರತಾ ಸಿಬ್ಬಂದಿ ಜೊತೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಬಂದು ಪರಿಸ್ಥಿತಿ ಶಾಂತಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.