ADVERTISEMENT

ರೈತರಿಗೆ ತೊಗರಿ ಬೀಜ ವಿತರಣೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 7:32 IST
Last Updated 7 ಜುಲೈ 2021, 7:32 IST
ಹನುಮಸಾಗರ ಸಮೀಪದ ಹನುಮನಾಳ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ರೈತರಿಗೆ ತೊಗರಿ ಬೀಜ ವಿತರಿಸಲಾಯಿತು
ಹನುಮಸಾಗರ ಸಮೀಪದ ಹನುಮನಾಳ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ರೈತರಿಗೆ ತೊಗರಿ ಬೀಜ ವಿತರಿಸಲಾಯಿತು   

ಹನುಮನಾಳ (ಹನುಮಸಾಗರ): ‘ಈ ಬಾರಿ ಸಮಯಕ್ಕೆ ಸರಿಯಾಗಿ ಮಳೆ ಸುರಿದಿದ್ದು, ಸಣ್ಣ ಹಾಗೂ ಅತಿಸಣ್ಣ ರೈತರು ಸರ್ಕಾರ ನೀಡುವ ರಿಯಾಯಿತಿ ದರದ ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಮಾಡಬೇಕು’ ಎಂದು ಜಹಗೀರಗುಡದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್.ಹನುಮಂತ ಹೇಳಿದರು.

ಸಮೀಪದ ಹನುಮನಾಳ ರೈತ ಸಂಪರ್ಕ ಕೇಂದ್ರದಲ್ಲಿ ಜಹಗೀರಗುಡದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ತೊಗರಿ ಬೀಜ ವಿತರಣೆ ಮಾಡಿ ಮಾತನಾಡಿದರು.

ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿ.ಎಮ್.ಹಿರೇಮಠ ಮಾತನಾಡಿ, ‘ಈಗಾಗಲೇ ಬಹುತೇಕ ರೈತರು ಹೆಸರು ಬಿತ್ತನೆ ಮಾಡಿದ್ದು, ಹೂವಾಡುವ ಹಂತದಲ್ಲಿದೆ. ಒಂದು ವಾರದ ಹಿಂದೆ ಮಳೆ ಕೊರತೆ ಹಾಗೂ ಮೋಡ ಮುಸುಕಿದ ವಾತಾವರಣದ ಕಾರಣ ಕೆಲ ಭಾಗದಲ್ಲಿ ಹೆಸರು ಬೆಳೆಗೆ ಹಳದಿ ನಂಜಾಣು ರೋಗ ಕಂಡುಬಂದಿದೆ. ಒಂದು ಬಾರಿ ಹಳದಿ ರೋಗ ಕಾಣಿಸಿಕೊಂಡರೆ ನಿಯಂತ್ರಣ ಮಾಡುವುದು ಕಷ್ಟವಾಗುವುದರಿಂದ ರೈತರು ಈಗಲೇ ಪ್ರತಿ ಲೀಟರ್ ನೀರಿಗೆ 0.25 ಮಿ.ಲೀ. ಇಮಿಡಾಕ್ಲೋಪ್ರಿಡ್ ಸಿಂಪಡಿಸಬೇಕು. ರೋಗಕ್ಕೆ ತುತ್ತಾದ ಸಸಿಗಳನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಕಿತ್ತು ನೆಲದಲ್ಲಿ ಹೂಳಬೇಕು ಇಲ್ಲವೆ ಸುಟ್ಟು ಹಾಕಬೇಕು. ಕ್ರಿಮಿನಾಶಕವನ್ನು ಬೆಳೆಗೆ ಸಿಂಪಡಿಸುವುದಕ್ಕಿಂತ ಮೊದಲು ಬದುವಿಗೆ ಸಿಂಪಡಿಸಿದರೆ ಅಲ್ಲಿ ವಾಸಮಾಡಿರುವ ಜಿಗಿಹುಳು ನಿಯಂತ್ರಣಕ್ಕೆ ಬರುತ್ತವೆ’ ಎಂದು ಸಲಹೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯ ಶರಣಪ್ಪ ಮಾಲಗಿತ್ತಿ, ಪ್ರಮುಖರಾದ ಲಕ್ಷ್ಮಣ್‍ರಾವ್ ಸಾಳಂಕೆ, ಪರಸಪ್ಪ ನಿಡಗುಂದಿ, ಚನ್ನವೀರಯ್ಯ ಹಿರೇಮಠ, ಶಿವಪ್ಪ ರೋಣದ, ಹನುಮಂತ ಭೀಮಪ್ಪ ಮಾಲಗಿತ್ತಿ, ವೆಂಕಟೇಶ್ ಗೋಡೆಕಾರ್, ಹನುಮಂತ ನೀಲಗುಂದ, ಶಂಕ್ರಪ್ಪ ಗೋಡೆಕಾರ್, ಶರಣಪ್ಪ ನೀಲಗುಂದ, ಬಸಪ್ಪ ಸುಳ್ಳದ, ಮುತ್ತಣ್ಣ ಗದ್ದಿ, ಸಂಗಪ್ಪ ಚೌವನ್ನವರ್, ರಂಗಪ್ಪ ಹೊಸಮನಿ, ನಾರಾಯಣರಾವ್ ಸೋಲಂಕಿ, ನಾಗಪ್ಪ ಹಾದಿಮನಿ ಹಾಗೂ ಶರಣಪ್ಪ ಹರ್ಜನ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.