ಕನಕಗಿರಿ: ಸಮೀಪದ ಬಸರಿಹಾಳ ಗ್ರಾಮದಲ್ಲಿ ಕರಡಿಗಳ ದಾಳಿ ಮುಂದುವರಿದಿದ್ದು, ಗ್ರಾಮದ ರೈತ ಕುಂಟೆಪ್ಪ ವಜ್ರಬಂಡಿ ಅವರು ಬೀಜೋತ್ಪಾದನೆಗೆ ಬೆಳೆದ ಕಲ್ಲಂಗಡಿ ಹಣ್ಣುಗಳನ್ನು ಸೋಮವಾರ ಬೆಳಿಗ್ಗೆ ತಿಂದು ಹಾಕಿವೆ.
40 ಹಣ್ಣುಗಳನ್ನು ಸಂಪೂರ್ಣವಾಗಿ ತಿಂದು ಹಾಕಿದರೆ, 30 ಹಣ್ಣುಗಳನ್ನು ಅರೆಬರೆಯಾಗಿ ತಿಂದು ಹಾಕಿವೆ. ಅಂದಾಜು ₹32 ಸಾವಿರ ನಷ್ಟವಾಗಿದೆ ಎಂದು ರೈತ ಕುಂಟೆಪ್ಪ ತಿಳಿಸಿದರು.
‘ಕಳೆದ ಮೂರು ದಿನಗಳ ಹಿಂದೆ ಶಂಕ್ರಪ್ಪ ನೆಟಗುಡ್ಡ ಎಂಬ ರೈತರ ಹೊಲದಲ್ಲಿ 60 ಕಲ್ಲಂಗಡಿಗಳನ್ನು ಕರಡಿಗಳು ತಿಂದು ಹಾಕಿವೆ. ಅಲ್ಲದೆ, ಸೋಮವಾರವೂ ಮತ್ತೊಂದು ಘಟನೆ ನಡೆದಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಪಂದಿಸುತ್ತಿಲ್ಲ. ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಕುಂಟೆಪ್ಪ ಹಾಗೂ ಯಮನೂರಪ್ಪ ದೂರಿದರು.
ಈ ಭಾಗದಲ್ಲಿ ಪದೇ ಪದೇ ಕರಡಿ, ಚಿರತೆಗಳು ಕಾಣಿಸಿಕೊಂಡು ರೈತರಲ್ಲಿ ಆತಂಕ ಮೂಡಿಸಿವೆ. ಕಾಡುಪ್ರಾಣಿ ಸೆರೆ ಹಿಡಿಯಬೇಕಾದ
ಅರಣ್ಯ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆ ಹಾನಿಗೆ ಅರಣ್ಯ ಇಲಾಖೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.