ಗಂಗಾವತಿ: ತಾಲ್ಲೂಕಿನ ವಿಠಲಾಪುರ ಗ್ರಾಮದಲ್ಲಿ ಹತ್ಯೆಯಾದ ದಲಿತ ಯುವತಿ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ, ಭಾರತ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಮಾತನಾಡಿ, ತಾಲೂಕಿನ ಆಗೋಲಿ ಗ್ರಾಮದ ದಲಿತ ಯುವತಿ, ವಿಠಲಾಪುರ ಗ್ರಾಮದ ಯುವಕ ಪರಸ್ಪರ ಪ್ರೀತಿಸಿ, ಕುಟುಂಬದವರ ಒಪ್ಪಿಗೆಯಿಂದ ಕಳೆದ ವರ್ಷ ಮದುವೆಯಾಗಿದ್ದರು. ಯುವತಿ ದಲಿತ ಸಮುದಾಯಕ್ಕೆ ಸೇರಿದ್ದಾಳೆ ಎಂಬ ಕಾರಣಕ್ಕೆ ಯುವಕನ ಕುಟುಂಬದವರು ಪದೇ ಪದೇ ಕಿರುಕುಳ ನೀಡುತ್ತಿದ್ದರು. ಈಚೆಗೆ ಯುವಕನ ಕುಟುಂಬದ ಸದಸ್ಯರು ಯುವತಿಗೆ ವರದಕ್ಷಿಣೆ ಕಿರುಕುಳ ಜತೆಗೆ ಮಾನಸಿಕವಾಗಿ ಹಿಂಸಿಸಿ, ದೈಹಿಕ ಹಲ್ಲೆ ನಡೆಸಿ, ಊಟದಲ್ಲಿ ವಿಷ ಬೆರೆಸಿ ಉಣಬಡಿಸಿ ಹತ್ಯೆ ಮಾಡಲಾಗಿದೆ ಎಂದು ಯುವತಿಯ ತಂದೆ ದೂರಿನ್ವಯ ಪ್ರಕರಣ ದಾಖಲಿಸಲಾಗಿದೆ. ದಲಿತರ ಮೇಲೆ ಹಲ್ಲೆ, ಅತ್ಯಾಚಾರ, ಹತ್ಯೆಯಂತಹ ಪ್ರಕರಣಗಳು ಜಿಲ್ಲೆಯಲ್ಲಿ ಸಾಕಷ್ಟು ಜರುಗುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಬೇಕಿದೆ. ದಲಿತರು ಬಡಜನರು ಆಗಿರುವುದರಿಂದ ಜೀವಗಳ ಹಾನಿಯಿಂದ ಬದುಕು ಮೂರಾಬಟ್ಟೆಯಾಗುತ್ತಿದ್ದು, ಸರ್ಕಾರವು ಹತ್ಯೆಯಾದ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಕಾರ್ಯಕರ್ತರಾದ ಬಸವರಾಜ, ಸುಂಕಪ್ಪ, ಹುಸೇನಪ್ಪ, ಮರಿಯಪ್ಪ, ಮಂಜುನಾಥ, ಶ್ರೀನಿವಾಸ ಬೆಣಕಲ್, ಬಾಳಪ್ಪ ಹುಲಿಹೈದರ ಸೇರಿ ಸಂಘಟನೆ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.