ADVERTISEMENT

ಕೊಪ್ಪಳ: ತಾವರಗೇರಾ, ಕುಷ್ಟಗಿಯಲ್ಲಿ ಸಂಕಲ್ಪ ಯಾತ್ರೆಯ ರೋಡ್‌ ಶೋ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2023, 9:25 IST
Last Updated 12 ಮಾರ್ಚ್ 2023, 9:25 IST
   

ಕೊಪ್ಪಳ: ಮುಂಬರುವ ವಿಧಾನಸಭಾ ಚುನಾವಣೆಗೆ ಮತಬೇಟೆ ಆರಂಭಿಸಿರುವ ಬಿಜೆಪಿ ತನ್ನ ವಿಜಯದ ಸಂಕಲ್ಪಕ್ಕಾಗಿ ಜಿಲ್ಲೆಯಲ್ಲಿ ಒಂದು ವಾರದ ಅವಧಿಯಲ್ಲಿ 11 ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಾ. 14ರಿಂದ 21ರ ವರೆಗೆ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಮೋರ್ಚಾಗಳ ಸಮಾವೇಶ ಆಯೋಜಿಸಿದೆ.

ಭಾನುವಾರ ಸಂಜೆ 5.30ಕ್ಕೆ ಗಂಟೆಗೆ ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ಸಭೆ ನಡೆಯಲಿದೆ. ಪೂರ್ವಭಾವಿಯಾಗಿ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಹಾಗೂ ಕುಷ್ಟಗಿ ಪಟ್ಟಣದಲ್ಲಿ ವಿಜಯಸಂಕಲ್ಪ ಯಾತ್ರೆಯ ರೋಡ್‌ ಶೋ ನಡೆಯಿತು. ಸಂಜೆ 5 ಗಂಟೆಗೆ ಕೊಪ್ಪಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಟಣಕನಕಲ್ಲು ಗ್ರಾಮಕ್ಕೆ ಬರಲಿರುವ ಯಾತ್ರೆಗೆ ಪಕ್ಷದ ವತಿಯಿಂದ ಯಾತ್ರೆಗೆ ಸ್ವಾಗತ ಕೋರಲಾಗುತ್ತದೆ. ಅಲ್ಲಿಂದ ಭಾಗ್ಯನಗರ ಮಾರ್ಗವಾಗಿ ತಾಲ್ಲೂಕು ಕ್ರೀಡಾಂಗಣದ ತನಕ ಬೈಕ್‌ ರ್‍ಯಾಲಿ ನಡೆಯಲಿದೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಸಚಿವರಾದ ಆನಂದ ಸಿಂಗ್‌, ಬಿ. ಶ್ರೀರಾಮುಲು, ಹಾಲಪ್ಪ ಆಚಾರ್‌, ಸಂಸದ ಸಂಗಣ್ಣ ಕರಡಿ, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ್‌ ಹಾಗೂ ಬಳ್ಳಾರಿ ವಿಭಾಗದ ಸಹ ಪ್ರಭಾರಿ ಚಂದ್ರಶೇಖರ ಪಾಟೀಲ ಹಲಗೇರಿ, ಸೇರಿದಂತೆ ಅನೇಕರು ರೋಡ್‌ ಶೋ ನಲ್ಲಿ ಪಾಲ್ಗೊಂಡಿದ್ದರು

ADVERTISEMENT

ಕೊಪ್ಪಳ ಜಿಲ್ಲೆಯಲ್ಲಿ ಬಿಜೆಪಿಯ ಕಾರ್ಯಕ್ರಮಗಳು

* ಮಾ. 13: ಗಂಗಾವತಿಯಲ್ಲಿ ಬೆಳಿಗ್ಗೆ 11 ಗಂಟೆಗೆ, ಮಧ್ಯಾಹ್ನ 3.30ಕ್ಕೆ ಕಾರಟಗಿಯಲ್ಲಿ ರೋಡ್‌ ಶೋ.

* ಮಾ. 14: ಕುಷ್ಟಗಿ ತಾಲ್ಲೂಕಿನ ಹನುಮಸಾಗರದಲ್ಲಿ ಬೆಳಿಗ್ಗೆ 11 ಗಂಟೆಗೆ ಎಸ್‌.ಟಿ. ಮೋರ್ಚಾ ಸಮಾವೇಶ

* ಮಾ. 17: ಗಂಗಾವತಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಯುವ ಮೋರ್ಚಾ ಸಮಾವೇಶ

* ಮಾ. 18: ಕಾರಟಗಿಯಲ್ಲಿ ಬೆಳಿಗ್ಗೆ 11 ಗಂಟೆಗೆ ರೈತ ಮೋರ್ಚಾ ಸಮಾವೇಶ

* ಮಾ. 19: ಕೊಪ್ಪಳದಲ್ಲಿ ಬೆಳಿಗ್ಗೆ 11 ಗಂಟೆಗೆ ಮಹಿಳಾ ಮೋರ್ಚಾ ಸಮಾವೇಶ

* ಮಾ. 20: ಯಲಬುರ್ಗಾದಲ್ಲಿ ಬೆಳಿಗ್ಗೆ 11 ಗಂಟೆಗೆ ಎಸ್‌.ಸಿ. ಮೋರ್ಚಾ ಸಮಾವೇಶ

* ಮಾ. 21: ಕನಕಗಿರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಒಬಿಸಿ ಮೋರ್ಚಾ ಸಮಾವೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.