ಕೊಪ್ಪಳ: ಮನುಕುಲದ ಕಲ್ಯಾಣಕ್ಕಾಗಿ ರಕ್ತದಾನ ಮತ್ತು ಆರೋಗ್ಯ ಸೇವೆ ಬೆಲೆಕಟ್ಟಲಾಗದ್ದು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಶಂಕರಗೌಡ.ಟಿ.ಕೆ.ಹೇಳಿದರು.
ಯಲಬುರ್ಗಾತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜೆಸಿಐ ಹಾಗೂ (ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಷಿಯೇಶನ್) ನಿಮಾ ಸಂಸ್ಥೆ ಜಂಟಿಯಾಗಿ ಹಮ್ಮಿಕೊಂಡಿದ್ದ ರಕ್ತದಾನ ಮತ್ತು ನೇತ್ರ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಇಂಥ ಸೇವೆಗಳು ನಡೆಯುತ್ತಿರುವುದು ಶ್ಲಾಘನೀಯವಾಗಿದೆ. ಇದನ್ನು ಅರ್ಥಪೂರ್ಣವಾಗಿ ಮಾಡಿ ಸ್ಥಳೀಯ ಆಡಳಿತ ಮತ್ತು ಭಾರತೀಯ ರೆಡ್ಕ್ರಾಸ್ ಸಂಸ್ಥೆ ಮುನ್ನಡೆಸುತ್ತಿರುವುದು ನಿಜಕ್ಕೂ ಶ್ಲಾಘನಿಯ.
ವೈದ್ಯರು ಸೇರಿದಂತೆ ಅನೇಕರು ಈ ಶಿಬಿರದಲ್ಲಿ ಶ್ರಮಿಸಿದ್ದಾರೆ. ಅವರಿಗೆ ಇದರ ಅಗತ್ಯ ಇಲ್ಲದೆ ಇದ್ದರೂ ಅವರು ಶ್ರಮವಹಿಸಿ, ನಾವು ಸಮಾಜಕ್ಕೆ ಏನಾದರೂ ಮಾಡಬೇಕು ಎಂದು ತಮ್ಮನ್ನು ತಾವು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸೇವೆಯೂ ಅಗಣನೀಯ ಎಂದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮರಡ್ಡಿ ಅಳವಂಡಿ ರಕ್ತದಾನ ಶಿಬಿರ ಮತ್ತು ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಸೇವೆಯನ್ನು ಬದುಕಿನಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಮನುಷ್ಯ ಪ್ರಾಣಿಯಂತೆ ಬದುಕುವುದಕ್ಕಿಂತ ಮನುಕುಲದ ಏಳ್ಗೆಗಾಗಿ ಆತನು ಶ್ರಮಿಸಬೇಕು ಎಂದರಲ್ಲದೇ, ಕೊಪ್ಪಳದಲ್ಲಿ ರೆಡ್ ಕ್ರಾಸ್ ಸಂಸ್ಥೆ ಪ್ರಾರಂಭಿಸಿದ ಮೇಲೆ ಈವರೆಗೂ ಅನೇಕ ಸಾಧನೆಯ ಮೈಲುಗಲ್ಲಾಗಿವೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಲಿಂಗಪ್ಪ ಕೋಳಜಿ, ಉಪಾಧ್ಯಕ್ಷೆ ಅನ್ನಪೂರ್ಣ ಗಡಾದ್, ಯಲಬುರ್ಗಾ ತಾಲ್ಲೂಕು ವೈದ್ಯಾಧಿಕಾರಿ ಮಂಜುನಾಥ ಬ್ಯಾಳಹುಣಸಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುನೀಲ್ ಚಿತ್ರಗಾರ, ನಿಮಾ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಸಿ.ಎಸ್.ಕರಮುಡಿ, ನಿಮಾ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಅಕ್ಕಿ, ಜೆಸಿಐ ಅಧ್ಯಕ್ಷ ಕೀರ್ತಿ ಪಾಟೀಲ್, ಡಾ. ಮಲ್ಲಪ್ಪ ಪಲೋಟಿ, ಪಿಡಿಓ ಹನುಮಂತ ನಾಯಕ್, ಡಾ.ಬಿ.ಎಲ್.ಕಲ್ಮಠ, ಡಾ.ಶಿವನಗೌಡ ದಾನರಡ್ಡಿ, ಡಾ.ಸುಧಾಕರ, ಡಾ.ವಿಜಯಕುಮಾರ ದಾನಿ, ಡಾ.ರುದ್ರಾಕ್ಷಿ ದೇವರಗುಡಿ, ಡಾ.ಕಸ್ತೂರಿ ಕರಮುಡಿ, ಭಾರತಿ ಗುಡ್ಲಾನೂರು ಮುಂತಾದವರು ಇದ್ದರು. ಡಾ. ಮಂಜುನಾಥ ನಿರೂಪಿಸಿ, ವಂದಿಸಿದರು. ಡಾ.ಶಿವನಗೌಡ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.