ADVERTISEMENT

ಹೆಣ್ಣು ಮಕ್ಕಳ ಕಾವ್ಯ ಪಯಣ ಸುಖವಿಲ್ಲ: ಮುಮ್ತಾಜ್ ಬೇಗಂ

‘ಗುರುತಿನ ಕೊರತೆಗಳು’ ಕವನ ಸಂಕಲನ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 15:39 IST
Last Updated 29 ಮಾರ್ಚ್ 2024, 15:39 IST
ಕೊಪ್ಪಳದಲ್ಲಿ ಶುಕ್ರವಾರ ನಡೆದ ‘ಗುರುತಿನ ಕೊರತೆಗಳು’  ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಬರಹಗಾರರನ್ನು ಸನ್ಮಾನಿಸಲಾಯಿತು
ಕೊಪ್ಪಳದಲ್ಲಿ ಶುಕ್ರವಾರ ನಡೆದ ‘ಗುರುತಿನ ಕೊರತೆಗಳು’  ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಬರಹಗಾರರನ್ನು ಸನ್ಮಾನಿಸಲಾಯಿತು   

ಕೊಪ್ಪಳ: ‘ಹೆಣ್ಣುಮಕ್ಕಳ ಕಾವ್ಯ ಪಯಣ ಸುಖಕರವಿಲ್ಲ. ಅವರು ಬದುಕೇ ಒಂದರ್ಥದಲ್ಲಿ ಹೋರಾಟದಂತಿದೆ. ಇಂತಹ ಪರಿಸ್ಥಿತಿಯಲ್ಲಿ ಸಾಹಿತ್ಯ ರಚನೆ ಅಷ್ಟು ಸುಲಭವಲ್ಲ’ ಎಂದು ರಾಜ್ಯ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆಯೂ ಆದ ಪ್ರಾಧ್ಯಾಪಕಿ ಮುಮ್ತಾಜ್ ಬೇಗಂ ಹೇಳಿದರು.

ಕೊಪ್ಪಳದ ಲಿಖಿತ್-ರೀನಾ ಪ್ರಕಾಶನ ಹಾಗೂ ಲೇಖಕಿಯರ ಸಂಘ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದಲ್ಲಿ ನಡೆದ ಅನ್ನಪೂರ್ಣ ಪದ್ಮಸಾಲಿಯವರ ‘ಗುರುತಿನ ಕೊರತೆಗಳು’  ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿ, ‘ಮಹಿಳೆಯರಿಗೆ ಅನೇಕ ಬಿಕ್ಕಟ್ಟುಗಳು, ತಲ್ಲಣಗಳು ಇರುತ್ತವೆ. ಇವುಗಳ ಮಧ್ಯೆ ಒಬ್ಬ ಹೆಂಗಸು ಸಾಹಿತ್ಯ ಕ್ಷೇತ್ರದಲ್ಲಿ ತೊಡಗುವುದಕ್ಕೆ ಅನೇಕ ಸವಾಲುಗಳಿರುತ್ತವೆ, ಅವುಗಳನ್ನು ಮೆಟ್ಟಿನಿಂತು ತಮ್ಮ ಬದುಕಿನಲ್ಲಿ ಅನುಭವಿಸಿದ ನೋವು-ನಲಿವುಗಳನ್ನು ಕಾವ್ಯ, ಕಥೆ ಮತ್ಯಾವುದೋ ಮಾಧ್ಯಮದ ಮೂಲಕ ಹೊರಹಾಕಬೇಕಿದೆ’ ಎಂದು ಅಭಿಪ್ರಾಯ ಪಟ್ಟರು.

ಕೃತಿಯ ಕುರಿತು ಮಾತನಾಡಿದ ಸವದತ್ತಿಯ ವಿಮರ್ಶಕ ನಾಗೇಶ ಜೆ. ನಾಯಕ್‌, ‘ಈ ಕೃತಿಯಲ್ಲಿ ಲೇಖಕಿಯ ಭಾವನೆಗಳು ಅಕ್ಷರಗಳ ಮೂಲಕ ಹೊರ ಹಾಕಿದ್ದಾರೆ. ಇದರಲ್ಲಿ ಹೆಣ್ಣಿನ ಶೋಷಣೆ, ಅನುಕಂಪ, ಆಕ್ರೋಶ, ಅನ್ನದಾತನ ಅಳಲು ಎಲ್ಲವೂ ಇವೆ. ಏನೇ ನೋವು-ಶೋಷಣೆಗಳಿದ್ದರೂ ಬದುಕಬೇಕೆಂಬ ಛಲ ಇದರಲ್ಲಿ ವ್ಯಕ್ತವಾಗಿದೆ’ ಎಂದರು.

ADVERTISEMENT

ನಿವೃತ್ತ ಪ್ರಾಧ್ಯಪಕ ಡಿ.ಎಂ.ಬಡಿಗೇರ ಕಾರ್ಯಕ್ರಮ ಉದ್ಘಾಟಿಸಿದರೆ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಿಕೊಂಡಿದ್ದರು.

ಉಪನ್ಯಾಸಕ ಸಿದ್ಧಲಿಂಗಪ್ಪ ಕೊಟ್ನೆಕಲ್, ಸಾಹಿತಿ ಎ.ಎಂ. ಮದರಿ, ಮೊರಬ ಘಟಕದ ಕಸಾಪ ಅಧ್ಯಕ್ಷ ಭೀಮರಾಶಿ ಹೂಗಾರ, ಕೃತಿಕಾರಾದ ಅನ್ನಪೂರ್ಣ ಪದ್ಮಸಾಲಿ ಪಾಲ್ಗೊಂಡಿದ್ದರು. ಇದೇ ವೇಳೆ ಸಿದ್ಧಲಿಂಗಪ್ಪ ಕೊಟ್ನೆಕಲ್, ಅಶೋಕ ಓಜನಹಳ್ಳಿ, ಶಿಲ್ಪಾ ಕೃಷ್ಣ ಚಿತ್ರಗಾರ, ಭೀಮರಾಶಿ ಹೂಗಾರ ಮತ್ತು ಮಹೇಶ ಬಳ್ಳಾರಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.