ADVERTISEMENT

ಜಾನುವಾರು ಕಳ್ಳತನ: ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 8:56 IST
Last Updated 6 ಸೆಪ್ಟೆಂಬರ್ 2021, 8:56 IST

ಕೊಪ್ಪಳ: ಜಾನುವಾರು ಕಳ್ಳತನಕ್ಕೆ ಸಂಬಂಧಿಸಿದಂತೆ ಯಲಬುರ್ಗಾದ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಇಬ್ಬರು ವ್ಯಕ್ತಿಗಳಿಗೆ ಶನಿವಾರ ದಂಡ ಸಹಿತ ಜೈಲು ಶಿಕ್ಷೆ ವಿಧಿಸಲಾಗಿದೆ.

ನ್ಯಾಯಾಧೀಶ ಶ್ರೀಶೈಲ ಬಾಗಡಿ ಅವರು ಅಪರಾಧಿಗಳಾದ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಬ್ಯಾಲವಾಡಗಿ ಗ್ರಾಮದ ಸದ್ದಾಂ ಹುಸೇನ ಭಾಷಾಸಾಬ್ ಪೈಲ್ವಾನ ಹಾಗೂ ಮುಂಡರಗಿ ತಾಲ್ಲೂಕಿನ ಪೇಠಾಲೂರು ಗ್ರಾಮದ ಆಶ್ರಯ ಕಾಲೊನಿಯ ಜಿಲಾನಿ ಜಾತಗಾರ ಅವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದ್ದಾರೆ.

ಆರೋಪಿಗಳು ಬೂನಕೊಪ್ಪ ಸೀಮಾದಲ್ಲಿರುವ ಹಗೇದಾಳ ಗ್ರಾಮದ ರೈತ ಚಿದಾನಂದಪ್ಪ ಕಮ್ಮಾರ ಅವರ ಜಮೀನಿನಲ್ಲಿರುವ ದನದ ಸೆಡ್ಡಿನಲ್ಲಿದ್ದ 2 ಎತ್ತು, 2 ಆಕಳನ್ನು 2020ರಲ್ಲಿ ರಾತ್ರಿ ವೇಳೆ ಕಳ್ಳತನ ಮಾಡಿಕೊಂಡು ಹೋಗಿ ದಾವಣಗೆರೆಯಲ್ಲಿ ಅಪರಿಚಿತ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದರು. ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ರೈತ ಪ್ರಕರಣ ದಾಖಲಿಸಿದ್ದರು.

ADVERTISEMENT

ಪ್ರಕರಣದ ತನಿಖೆ ಬೆನ್ನತ್ತಿದ ಅಂದಿನ ಪಿ.ಎಸ್.ಐ. ಹನಮಂತಪ್ಪ ತಳವಾರ ಹಾಗೂ ಸಿಪಿಐ ಎಂ.ನಾಗರೆಡ್ಡಿ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಅಬೀದುಲ್ಲಾ ಇಮಾಮಸಾಬ್ ಹಾದಿಮನಿ ಅವರು ವಾದ ಮಂಡಿಸಿದ್ದಾರೆ.

ಪ್ರಕರಣ ಬೇಧಿಸಿ ಆರೋಪಿಗಳಿಗೆ ಶಿಕ್ಷೆಯಾಗಲು ಶ್ರಮಿಸಿದ ಸಿಪಿಐ ನಾಗರೆಡ್ಡಿ ಮತ್ತು ಅವರ ತಂಡಕ್ಕೆ ಎಸ್‌ಪಿ ಬಹುಮಾನ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.