ADVERTISEMENT

ಕೃಷಿ ಇಲಾಖೆ ಯೋಜನೆ ಸದ್ಬಳಕೆಗೆ ಸಲಹೆ

ಕಿಸಾನ್‌ ಗೋಷ್ಠಿ ಕಾರ್ಯಕ್ರಮದಲ್ಲಿ ಮಹಿಳಾ ಸಂಘಗಳಿಗೆ ಚೆಕ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2021, 5:21 IST
Last Updated 18 ಆಗಸ್ಟ್ 2021, 5:21 IST
ಕುಷ್ಟಗಿ ತಾಲ್ಲೂಕು ದುರ್ಗಾದೇವಿ ಮಹಿಳಾ ಸಂಘಕ್ಕೆ ಶಾಸಕ ಅಮರೇಗೌಡ ಬಯ್ಯಾಪುರ ಸುತ್ತುನಿಧಿ ಚೆಕ್‌ ಹಸ್ತಾಂತರಿಸಿದರು
ಕುಷ್ಟಗಿ ತಾಲ್ಲೂಕು ದುರ್ಗಾದೇವಿ ಮಹಿಳಾ ಸಂಘಕ್ಕೆ ಶಾಸಕ ಅಮರೇಗೌಡ ಬಯ್ಯಾಪುರ ಸುತ್ತುನಿಧಿ ಚೆಕ್‌ ಹಸ್ತಾಂತರಿಸಿದರು   

ಕುಷ್ಟಗಿ: ಸರ್ಕಾರದ ಕೃಷಿ ಮತ್ತಿತರೆ ಇಲಾಖೆಗಳ ಆರ್ಥಿಕ ನೆರವಿನೊಂದಿಗೆ ಸಂಘಟನಾತ್ಮಕ ಚಟುವಟಿಕಗಳನ್ನು ನಡೆಸುವುದರಿಂದ ಮಹಿಳೆಯರ ಆರ್ಥಿಕ ಸಬಲೀಕರಣ ಸಾಧ್ಯವಾಗುತ್ತದೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಕೃಷಿ ಇಲಾಖೆ ಹಮ್ಮಿಕೊಂಡಿದ್ದ ಕಿಸಾನ್‌ ಗೋಷ್ಠಿ ಕಾರ್ಯಕ್ರಮದಲ್ಲಿ ಮಹಿಳಾ ಸಂಘಗಳಿಗೆ ₹10 ಸಾವಿರ ಮೊತ್ತದ ಚೆಕ್‌ ಹಸ್ತಾಂತರಿಸಿ ಮಾತನಾಡಿದ ಅವರು,‘ ಕೃಷಿ ಕ್ಷೇತ್ರದಲ್ಲಿ ಮಹಿಳೆಯರಿಗೆ ವಿಪುಲ ಅವಕಾಶಗಳಿವೆ, ವಿವಿಧ ಯೋಜನೆಗಳ ಮೂಲಕ ಸರ್ಕಾರದ ಹೆಚ್ಚಿನ ಪ್ರೋತ್ಸಾಹವೂ ಇದ್ದು, ಸದ್ಬಳಕೆ ಮಾಡಿಕೊಳ್ಳಬೇಕು. ಕೇವಲ ಸಹಾಯಧನ, ಸರ್ಕಾರದ ನೆರವು ಪಡೆಯಲು ಮಾತ್ರ ಸಂಘಗಳು ಇರಬಾರದು ಎಂದರು.

ಹಿರೇಬನ್ನಿಗೋಳದ ಪ್ರಗತಿಪರ ರೈತ ಶರಣಪ್ಪ ಭತ್ತದ ಮಾತನಾಡಿ, ‘ಕೃಷಿ ಇಲಾಖೆಯ ಸಲಹೆಗಳನ್ನು ಪಾಲಿಸಿ ಸಮಗ್ರ ಕೃಷಿ ಕೈಗೊಂಡಿದ್ದರಿಂದ ತಾವು ಆರ್ಥಿಕವಾಗಿ ಸ್ವಾವಲಂಬನೆ ಹೊಂದಲು ಸಾಧ್ಯವಾಯಿತು’ ಎಂದರು.

ADVERTISEMENT

ರೈತ ಶಿವನಗೌಡ ಪಾಟೀಲ ಮಾತನಾಡಿ,‘ಬೆಳೆಯಲ್ಲಿ ವೈವಿಧ್ಯತೆ ಇರಬೇಕು. ಕೇವಲ ಒಂದೇ ಬೆಳೆಯನ್ನು ಬೆಳೆಯದೆ ಸಿರಿಧಾನ್ಯಗಳತ್ತ ರೈತರು ಗಮನಹರಿಸಬೇಕು’ ಎಂದರು. ಹೂಲಗೇರಿಯ ದುರ್ಗಾದೇವಿ ಮಹಿಳಾ ಸಂಘದ ಸದಸ್ಯ ಲಕ್ಷ್ಮಿ ಸಂಘ ಬೆಳೆದು ಬಂದ ರೀತಿ, ಬೆಳೆ ವಿಮೆ ಯೋಜನೆಯಲ್ಲಿ ರೈತರ ಪಾಲ್ಗೊಳ್ಳುವಿಕೆ ಮತ್ತು ಯೋಜನೆಗಳ ಪ್ರಯೋಜನ, ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುರಿತು ಅನುಭವ ಹಂಚಿಕೊಂಡರು.ಕೃಷಿ ಸಹಾಯಕ ನಿರ್ದೇಶಕ ವಿ.ತಿಪ್ಪೇಸ್ವಾಮಿ ಕೃಷಿ ಇಲಾಖೆಯ ಪ್ರಮುಖ ಯೋಜನೆಗಳು, ಬೆಳೆವಿಮೆಯಿಂದ ಆಗುವ ಅನುಕೂಲ, ಬೆಳೆ ಸಮೀಕ್ಷೆ ಕುರಿತು ಮಾಹಿತಿ ನೀಡಿದರು. ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ನಿರೂಪಿಸಿದರು. ಅನೇಕ ರೈತರು, ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.