
ಗಂಗಾವತಿ: ‘ಮಕ್ಕಳ ಸಮಸ್ಯೆಗಳನ್ನು ಆಲಿಸಲು ಮಕ್ಕಳ ಹಕ್ಕುಗಳ ಗ್ರಾಮಸಭೆಗಳು ಸಹಕಾರಿಯಾಗಿವೆ’ ಎಂದು ವಡ್ಡರಹಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ ಚಲವಾದಿ ಹೇಳಿದರು.
ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾಪಂ ವತಿಯಿಂದ ಮಂಗಳವಾರ ಹಮ್ಮಿಕೊಂಡ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
‘ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಮಕ್ಕಳು ಉಪಯೋಗಿಸಿಕೊಂಡು ಶಿಕ್ಷಣವಂತರಾಗಬೇಕು. ಕಲಿಕೆ ಸಮಯದಲ್ಲಿ ಮೊಬೈಲ್ ಬಳಕೆಯಿಂದ ದೂರವಿರಬೇಕು. ಆಟೋಟಗಳ ಜೊತೆಗೆ ಅಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಮಕ್ಕಳು ಗ್ರಂಥಾಲಯದ ಸೌಲಭ್ಯ ಪಡೆದುಕೊಳ್ಳಬೇಕು’ ಎಂದರು.
ಶಾಲಾ ರಜೆ ದಿನದ ಬೇಸಿಗೆ ಅವಧಿಯಲ್ಲಿ ವಡ್ಡರಹಟ್ಟಿ ಗ್ರಾ.ಪಂನಿಂದ ಬೇಸಿಗೆ ಶಿಬಿರ ಆಯೋಜಿಸಿ ಬಡ ಮ್ಕಕಳಿಗೆ ಪಠ್ಯೇತರ ಚಟುವಟಿಕೆ ಕೈಗೊಂಡು ಕಲಿಕಾ ಆಸಕ್ತಿ ಹೆಚ್ಚಿಸಲಾಗಿದೆ. ಇಂತಹ ಶಿಬಿರಗಳ ಲಾಭ ಪಡೆದುಕೊಳ್ಳಬೇಕು. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಎಲ್ಲ ವಿಷಯಗಳ ಕುರಿತು ಜ್ಞಾನ ಹೊಂದಬೇಕು. ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ತಡೆ ಕುರಿತು ವ್ಯಾಪಕ ಜಾಗೃತಿ ಮೂಡಿಸಲಾಗಿದೆ. ಇಂಥ ಪದ್ಧತಿಗಳು ಕಂಡು ಬಂದಲ್ಲಿ ಸಂಬಂಧಿಸಿದ ಇಲಾಖೆ ಹಾಗೂ ಸಹಾಯವಾಣಿ ನಂಬರ್ ಗೆ ಕರೆ ಮಾಡಿ’ ಎಂದು ತಿಳಿಸಿದರು.
ಸಮಸ್ಯೆ ಹೇಳಿಕೊಂಡ ಮಕ್ಕಳು: ಶಾಲೆಯ ಬಳಿಯ ರಸ್ತೆಗೆ ಹಂಪ್ಸ್ ಅಳವಡಿಸಿ ಬೆಳಿಗ್ಗೆ ಮತ್ತು ಶಾಲೆ ಬಿಡುವ ಸಮಯದಲ್ಲಿ ಬ್ಯಾರಿಕೇಡ್ ಅಳವಡಿಸಬೇಕು. ಶಾಲೆಗಳಲ್ಲಿ ಶೌಚಾಲಯ ಮತ್ತು ಮೂಲಸೌಕರ್ಯ ಕಲ್ಪಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಕಿಡಿಗೇಡಿಗಳ ಹಾವಳಿ ಹೆಚ್ಚಿದ್ದು, ಬೀಟ್ ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕು. ಜೊತೆಗೆ ದುರಸ್ತಿಗೊಳಗಾದ ಶಾಲಾ ಕೊಠಡಿಗಳನ್ನು ದುರಸ್ತಿ ಪಡಿಸಲು ಗ್ರಾಪಂ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಶಾಲಾ ಮಕ್ಕಳು ಕೋರಿದರು.
ನಂತರ ಪಿಡಿಒ ಪ್ರತಿಕ್ರಿಯಿಸಿ ಮಕ್ಕಳ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದರು.
ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ವಿರೋಧಿ ಕುರಿತು ಜಾಗೃತ ಗೀತೆ ಹಾಗೂ ನಾಟಕ ಗಳನ್ನು ಶಾಲಾ ಮಕ್ಕಳು ಅಭಿನಯಿಸಿ ಗಮನಸೆಳೆದರು.
ಗ್ರಾಪಂ ಉಪಾಧ್ಯಕ್ಷ ಗೌಸ್ಸಾಬ್ ತಾಳಕೇರಿ, ಗ್ರಾಪಂ ಸದಸ್ಯರಾದ ಹೊನ್ನುರಬೀ, ಶಾಂತಮ್ಮ, ಸಿಆರ್ಪಿ ವಿಜಯಕುಮಾರ್, ಅಂಗನವಾಡಿ ವಲಯ ಮೇಲ್ವಿಚಾರಕಿ ವಿದ್ಯಾವತಿ, ಗ್ರಾಪಂ ಕಾರ್ಯದರ್ಶಿ ಈಶಪ್ಪ, ವಡ್ಡರಹಟ್ಟಿ ಸಹಿಪ್ರಾ ಶಾಲೆ ಮುಖ್ಯಶಿಕ್ಷಕ ವೇದಬಾಯಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.