ಕೊಪ್ಪಳ: ನಾಗರಿಕ ಸೇವಾ ಪರೀಕ್ಷೆಗಳಾದ ಐಎಎಸ್, ಐಪಿಎಸ್, ಕೆಎಎಸ್ ಮುಂತಾದ ಪರೀಕ್ಷೆಗಳ ಕುರಿತಾಗಿ ಮಾಹಿತಿ ನೀಡಲು ಜಿಲ್ಲಾಡಳಿತದ ವತಿಯಿಂದ ಶನಿವಾರ ಯೂಟ್ಯೂಬ್ ಮತ್ತು ಫೇಸ್ಬುಕ್ ಲೈವ್ ಮೂಲಕ ಓರಿಯಂಟೇಷನ್ ಕಾರ್ಯಕ್ರಮಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಐಎಎಸ್ ಪ್ರೊಬೇಷನರಿ ಅಧಿಕಾರಿ ಹೇಮಂತ್ ಎನ್. (2020ನೇ ಬ್ಯಾಚ್) ಅವರು ಪರೀಕ್ಷೆಗಳ ಹಂತಗಳು, ಭಾಷೆ ಹಾಗೂ ಐಚ್ಛಿಕ ವಿಷಯಗಳ ಆಯ್ಕೆ, ಪ್ರಿಲಿಮ್ಸ್ ಹಾಗೂ ಮೇನ್ಸ್ ಪರೀಕ್ಷೆಗಳಿಗೆ ಅಧ್ಯಯನ ನಡೆಸಬೇಕಾದ ವಿಷಯಗಳು, ಪ್ರಕಾರಗಳು, ವ್ಯಕ್ತಿತ್ವ ಪರೀಕ್ಷೆ ಎದುರಿಸುವುದು ಮುಂತಾದ ವಿಷಯಗಳ ಕುರಿತು ತಮ್ಮ ಅನುಭವಗಳ ಸಹಿತ ವಿವರಣೆಗಳನ್ನುನೀಡಿದರು.
ನಾಗರಿಕ ಸೇವೆಗಳ ಪರೀಕ್ಷೆಗೆ ಬಡತನ, ಆರ್ಥಿಕ ದುರ್ಬಲತೆ ಅಡ್ಡಿಯಲ್ಲ ಎಂದು ತಿಳಿಸುತ್ತ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದಿಂದ ಇರುವ ವಿದ್ಯಾರ್ಥಿ ವೇತನ ಸೌಲಭ್ಯದ ಕುರಿತು ಮಾಹಿತಿ ನೀಡಿದರು.
ಈ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ 5200ಕ್ಕೂ ಹೆಚ್ಚು ಆಸಕ್ತ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇಂದಿನ ಕಾರ್ಯಕ್ರಮದಲ್ಲಿ 2000ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿ ನಾಗರಿಕ ಸೇವೆಗಳ ಪರೀಕ್ಷೆಗಳ ಕುರಿತು ಇರುವ ಸಂದೇಹಗಳಿಗೆ ಪ್ರಶ್ನೆಗಳನ್ನು ಕೇಳುವುದರ ಮೂಲಕ ಸಲಹೆಗಳನ್ನು, ಉತ್ತರಗಳನ್ನು ಪಡೆದರು.
ಜಿಲ್ಲಾಡಳಿತದ ಈ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಯಿತು. ಯೂನಿಸೆಫ್ನ ಜಿಲ್ಲಾ ಸಂಯೋಜಕ ಹರೀಶ್ ಜೋಗಿ ಅವರು ಕಾರ್ಯಕ್ರಮದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.