ADVERTISEMENT

ಕಾಂಗ್ರೆಸ್‌ಗೆ ಗುಂಡಿಗೆಯೂ ಇದೆ, ದೂರದೃಷ್ಟಿಯೂ ಇದೆ: ಶಾಸಕ ರಾಘವೇಂದ್ರ ಹಿಟ್ನಾಳ

ಆನಂದ್‌ ಸಿಂಗ್‌ ಹೇಳಿಕೆಗೆ ತಿರುಗೇಟು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2023, 12:34 IST
Last Updated 3 ಏಪ್ರಿಲ್ 2023, 12:34 IST
ಆನಂದ್‌ ಸಿಂಗ್‌, ರಾಘವೇಂದ್ರ ಹಿಟ್ನಾಳ
ಆನಂದ್‌ ಸಿಂಗ್‌, ರಾಘವೇಂದ್ರ ಹಿಟ್ನಾಳ   

ಕೊಪ್ಪಳ: ‘ಕಾಂಗ್ರೆಸ್‌ ಪಕ್ಷಕ್ಕೆ ಗುಂಡಿಗೆಯೂ ಇದೆ, ಗಟ್ಟಿತನವೂ ಇದೆ. ಭವಿಷ್ಯದ ಅಭಿವೃದ್ಧಿಯ ದೃಷ್ಟಿಕೋನವೂ ಇದೆ’ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ತಿರುಗೇಟು ನೀಡಿದರು.

ಕೊಪ್ಪಳ ತಾಲ್ಲೂಕಿನ ಗುಡಗೇರಿ ಗ್ರಾಮದಲ್ಲಿ ಸೋಮವಾರ ಪ್ರಚಾರ ಕಾರ್ಯದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಅವರು ಭಾನುವಾರ ಸಚಿವ ಆನಂದ್‌ ಸಿಂಗ್‌, ಗಂಗಾವತಿ ತಾಲ್ಲೂಕಿನ ಮರಳಿ ಗ್ರಾಮದಲ್ಲಿ ನೀಡಿದ್ದ ’ಕಾಂಗ್ರೆಸ್‌ಗೆ ಗುಂಡಿಗೆಯೂ ಇಲ್ಲ. ಗಂಡಸುತನವೂ ಇಲ್ಲ’ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದರು.

‘ಆನಂದ್‌ ಸಿಂಗ್‌ ಯಾಕೆ ಆ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನುವುದು ಗೊತ್ತಿಲ್ಲ. ಗಂಡಸುತನ ಎನ್ನುವ ಪದ ಬಳಕೆ ಮಾಡಿದ್ದು ಯಾಕೆ ಎನ್ನುವುದನ್ನು ಅವರೇ ಹೇಳಬೇಕು. ಅವರಷ್ಟು ಕೀಳುಮಟ್ಟಕ್ಕೆ ಇಳಿಯವುದಿಲ್ಲ. ಈ ಹೇಳಿಕೆ ಅವರ ವ್ಯಕ್ವಿತ್ವ ತೋರಿಸುತ್ತದೆ. ಈಗಿನ ಚುನಾವಣೆಯಲ್ಲಿ ಅವರ ಕ್ಷೇತ್ರದ ಜನ ತಕ್ಕ ಪಾಠ ಕಲಿಸುತ್ತಾರೆ’ ಎಂದರು.

ADVERTISEMENT

ವಿಧಾನಪರಿಷತ್‌ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್‌ ಮುಖಂಡ ಕರಿಯಣ್ಣ ಸಂಗಟಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರನ್ನು ಭೇಟಿಯಾದ ಬಗ್ಗೆ ಕೇಳಲಾದ ಪ್ರಶ್ನೆಗೆ ’ಯಾಕೆ ಭೇಟಿಯಾಗಿದ್ದಾರೆ ಎನ್ನುವುದನ್ನು ಗೊತ್ತಿಲ್ಲ. ಕಾಂಗ್ರೆಸ್‌ ರೈಲು ಇದ್ದ ಹಾಗೆ. ಹತ್ತುವವರು ಹತ್ತುತ್ತಾರೆ, ಇಳಿಯುವವರು ಇಳಿದು ಹೋಗುತ್ತಾರೆ. ಹಿಂದಿನ ಎರಡು ಅವಧಿಯಲ್ಲಿ ಶಾಸಕನಾಗಿ ಕ್ಷೇತ್ರಕ್ಕೆ ₹4,500 ಕೋಟಿ ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಜನ ಈ ಬಾರಿಯೂ ಆಶೀರ್ವಾದ ಮಾಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.