ಕೊಪ್ಪಳ: ಮುಂಬೈನಿಂದ ಬಂದಿರುವ ಜಿಲ್ಲೆಯ ಕನಕಗಿರಿಯ 28 ವರ್ಷದ ವ್ಯಕ್ತಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೋಂಕಿತನ ಕುಟುಂಬ ಮುಂಬೈನ ದಿವಾ ಏರಿಯಾದಲ್ಲಿ ಕಳೆದ 30 ವರ್ಷಗಳಿಂದ ವಾಸಿಸುತ್ತಿತ್ತು. ಅಲ್ಲಿ ಅವರನ್ನು 15 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಅವರು ಮೇ 30 ರಂದು ಮುಂಬೈನ ದಿವಾ ಏರಿಯಾದಿಂದ ಚಾಲಕನೊಂದಿಗೆ ಖಾಸಗಿ ವಾಹನದಲ್ಲಿ ತಂದೆ ಮತ್ತು ತಾಯಿಯೊಡನೆ ಹೊರಟು ಮೇ 31 ರಂದು ಕೊಪ್ಪಳ ಜಿಲ್ಲೆಗೆ ಬಂದಿದ್ದರು. ಬಳಿಕ ಅವರನ್ನು ಕನಕಗಿರಿಯಲ್ಲಿ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇಡಲಾಗಿತ್ತು.
ಜೂನ್ 2 ರಂದು ಗಂಗಾವತಿಯಲ್ಲಿ ಸ್ವಾಬ್ ಟೆಸ್ಟ್ ಮಾಡಲಾಗಿತ್ತು. ಜೂನ್ 5 ರಂದು ಸಾಯಂಕಾಲ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅದೇ ದಿನ ಸೋಂಕಿತ ವ್ಯಕ್ತಿಯನ್ನು ಕೊಪ್ಪಳದ ಕೋವಿಡ್-19 ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಸ್ಥಳಾಂತರಿಸಲಾಗಿದೆ. ಸೋಂಕಿತನ ತಂದೆ, ತಾಯಿ ಮತ್ತು ಸಾಂಸ್ಥಿಕ ಕ್ವಾರಂಟೈನ್ನಲ್ಲಿರುವ ಪಕ್ಕದ ರೂಮಿನ ಸದಸ್ಯರು ಮತ್ತು ಇವರನ್ನು ನೋಡಲು ಆಗಮಿಸಿದ್ದ ಅಜ್ಜಿ ಸೇರಿದಂತೆ ಒಟ್ಟು 4 ಜನ ಪ್ರಾಥಮಿಕ ಸಂಪರ್ಕಿತ ವ್ಯಕ್ತಿಗಳನ್ನು ಪ್ರಸ್ತುತ ಕ್ವಾರಂಟೈನ್ನಲ್ಲಿ ಮುಂದುವರೆಸಲಾಗಿದೆ.
ಪಕ್ಕದ ರೂಮಿನ ವ್ಯಕ್ತಿಗೆ ಊಟ ಕೊಡಲು ಅವರ ಅಣ್ಣ ಬಂದಿರುವ ಕಾರಣ ಅವರನ್ನು ಮತ್ತು ಅಜ್ಜಿಯ ಮನೆಯಲ್ಲಿರುವ 4 ಜನರು ದ್ವಿತೀಯ ಸಂಪರ್ಕಿತರಾಗಿದ್ದಾರೆ. ಈವರೆಗೆ ಒಟ್ಟು 5 ಜನ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚುವ ಕಾರ್ಯ ನಡೆದಿದೆ ಎಂದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಮುಂಬೈನಿಂದ ವಾಪಾಸಾದ ಬಳಿಕ ಸೋಂಕಿತ ವ್ಯಕ್ತಿಯನ್ನು ಕ್ವಾರಂಟೈನ್ಲ್ಲಿ ಇಡಲಾಗಿತ್ತು ಎಂಬುದೇ ಸಮಾಧಾನಕರ ಸಂಗತಿಯಾಗಿದ್ದು, ಈ ಪ್ರಕರಣದೊಂದಿಗೆ ಈವರೆಗೆ ಜಿಲ್ಲೆಯಲ್ಲಿ ಒಟ್ಟು 5 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದಾಖಲಾದಂತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.