ಕನಕಗಿರಿ: ‘ಮುಂಚೂಣಿ ಕಾರ್ಯಕರ್ತರಿಗೆ ಕೋವಿಶೀಲ್ಡ್ ಲಸಿಕೆ ನೀಡಲು ಕೇಂದ್ರ ಆರಂಭಿಸಲಾಗಿದೆ’ ಎಂದು ನೋಡಲ್ ಅಧಿಕಾರಿ ಹಾಗೂ ಪ್ರೊಬೇಷನರಿ ಉಪ ವಿಭಾಗಾಧಿಕಾರಿ ರಜನೀಕಾಂತ ತಿಳಿಸಿದರು.
ಪಟ್ಟಣದ ಎಪಿಎಂಸಿ ಕಚೇರಿ ಆವರಣದಲ್ಲಿ ಶುಕ್ರವಾರ ಲಸಿಕಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
18 ರಿಂದ 44 ವಯಸ್ಸಿನವರಿಗೆ ಲಸಿಕೆ ಹಾಕಲಾಗುತ್ತಿದೆ. ಗಂಜ್, ಬಜಾರ್ ಹಮಾಲರು, ಕಿರಾಣಿ ಅಂಗಡಿ ಮಾಲೀಕರು, ಕಟ್ಟಡ ಕಾರ್ಮಿಕರು, ಹಣ್ಣು, ತರಕಾರಿ ಅಂಗಡಿ ಮಾಲೀಕರು, ಔಷಧಿ ಅಂಗಡಿಯವರು, ಅಂಗವಿಕಲರು, ನ್ಯಾಯ ಬೆಲೆ ಅಂಗಡಿಯವರು ಇತರರಿಗೆ ಈ ಲಸಿಕೆ ಹಾಕಲಾಗುತ್ತಿದೆ. ಮುಂಚೂಣಿ ಕಾರ್ಯಕರ್ತರು ಭಯ ಪಡದೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಬಸವರಾಜ ದಢೇಸೂಗೂರು ಅವರು ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ನಂತರ ಮಾತನಾಡಿದ ಅವರು,‘ಸಾರ್ವಜನಿಕರು ಕೊರೊನಾ ಕುರಿತು ಭಯ ಪಡದೆ ಎಚ್ಚರಿಕೆ ವಹಿಸಬೇಕು. ಅನಗತ್ಯವಾಗಿ ಹೊರಗಡೆ ತಿರುಗಾಡಬಾರದು’ ಎಂದರು.
ತಹಶೀಲ್ದಾರ್ ರವಿ ಅಂಗಡಿ ಮಾತನಾಡಿ,‘ತಾಲ್ಲೂಕಿನಲ್ಲಿ ಲಸಿಕೆ ಕೊರತೆ ಇಲ್ಲ. ಕೆಲ ದಿನಗಳ ನಂತರ ಸಾರ್ವಜನಿಕರಿಗೂ ಲಸಿಕೆ ಹಾಕಲಾಗುವುದು’ ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿರುಮಲಮ್ಮ, ದಲ್ಲಾಳಿ ವರ್ತಕರ ಸಂಘದ ಮಹಾಂತೇಶ ಸಜ್ಜನ್ ಹಾಗೂ ವರ್ತಕ ಹನುಮೇಶ ಯಲಬುರ್ಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.