ಕೊಪ್ಪಳ:ಕೋವಿಡ್ ವಿಮಾ ಭದ್ರತೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಿಮ್ಸ್ ಸಿಬ್ಬಂದಿ ನೌಕರರ ಸಂಘದ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
6ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡಬೇಕು. ಕಿಯೋನಿಕ್ಸ್ಗೆ ಕಾರ್ಮಿಕ ಇಲಾಖೆ ನಿಗದಿಗೊಳಿಸಿದ ಕನಿಷ್ಠ ವೇತನ ಒದಗಿಸಬೇಕು. ಕೋವಿಡ್-19 ಸೇವೆಯಲ್ಲಿರುವ ವೈದ್ಯರಿಗೆ ಹಾಗೂ ಶುಶ್ರೂಷಕರಿಗೆ ಸಿಗುವಂತಹ ವಿಮಾ ಭದ್ರತೆ ಡಿ ಗ್ರೂಪ್ ಕಾರ್ಮಿಕರಿಗೆ ಕೊಡಬೇಕು. ಕೊವೀಡ್-19ನಿಂದ ಸಂಕಷ್ಟ ಪ್ರೋತ್ಸಾಹಧನ₹ 10 ಸಾವಿರ ಕಾರ್ಮಿಕರಿಗೆ ಮಾರ್ಚ್ನಿಂದ ಅನ್ವಯಿಸಿ ಶೀಘ್ರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಡಿ ವರ್ಗದ ಟಾಯ್ಲೆಟ್ ತೊಳೆಯುವ ಮೃತ ಕೆ.ರಾಮಯ್ಯನ ಕುಟುಂಬಕ್ಕೆ₹ 10 ಲಕ್ಷ ಪರಿಹಾರ ಒದಗಿಸಬೇಕು. ಮೃತರನ್ನು ಪ್ಯಾಕ್ ಮಾಡುವ, ಸಾಗಿಸುವ, ರೋಗಿ ಸ್ಥಳಾಂತರಿಸುವಲ್ಲಿ ಹೆಚ್ಚುವರಿ ಅಗತ್ಯ ಸಿಬ್ಬಂದಿ ಒದಗಿಸಬೇಕು. ಕೋವಿಡ್-19 ಸೇವೆಗೆ ಪಿಪಿಇ ಕಿಟ್ ಹಾಕುವ ಕೆಲಸಗಾರರ ಸಮಯ 4 ಗಂಟೆಗೆ ಇಳಿಸಬೇಕು. ಶುಚಿತ್ವದ ಕೆಲಸದಲ್ಲಿ ಕಾರ್ಮಿಕರ ಸಂಖ್ಯೆ ಕಡಿತಗೊಳಿಸಲಾಗಿದೆ. ಈ ಮೊದಲಿನಂತೆ ಕಾರ್ಮಿಕರನ್ನು ನೇಮಿಸಬೇಕು ಎಂದು ಕಿಮ್ಸ್ ಸಿಬ್ಬಂದಿ ಆಗ್ರಹಿಸಿದರು.
ಅಗತ್ಯ ಸುರಕ್ಷಾ ಸಲಕರಣೆ ಸಾಮಗ್ರಿ ಒದಗಿಸಬೇಕು. ನಿರಂತರವಾಗಿ ಕಾರ್ಮಿಕರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕು. ಕೋವಿಡ್-19 ಸೇವೆಯಲ್ಲಿ ವೈದ್ಯರಿಗೆ ಮತ್ತು ಶುಶ್ರೂಷಕ ಸಿಬ್ಬಂದಿಗೆ ಸಿಗುವ ಕೆಲಸದ ನಂತರ ವಸತಿ, ವಿಶೇಷ ರಜೆ ಒದಗಿಸಬೇಕು. ವಾರದ ರಜೆ ಕಡ್ಡಾಯಗೊಳಿಸಿ, ಇದುವರೆಗೂ ದುಡಿಸಿದ ವಾರದ ರಜೆಯ ಕೆಲಸದ ಓ.ಟಿ ನೀಡಬೇಕು. ಕಾರ್ಮಿಕರ ಹೊರಗುತ್ತಿಗೆ ರದ್ದುಪಡಿಸಿ, ಶುಶ್ರೂಕ ಸಿಬ್ಬಂದಿಯಂತೆ ನೇರ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಬೇಕು ಎಂದು ಸಂಘದ ಮುಖಂಡರು ಒತ್ತಾಯಿಸಿದರು.
ಎಸ್.ಬಿ.ಗೋನಾಳ, ಮಂಜುನಾಥ, ರಾಮಣ್ಣ, ಪುಷ್ಪಾ, ಮಂಜುಳಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.