ಜನಾರ್ದನ ರೆಡ್ಡಿ, ಶ್ರೀರಾಮುಲು
ಕೊಪ್ಪಳ: ‘ಸಂಡೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಬಿ. ಶ್ರೀರಾಮುಲು ಕಾರಣವೆಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಹೇಳಿದ್ದು, ಇದು ನಮ್ಮ ಸಮಾಜದ ನಾಯಕನಿಗೆ ಮಾಡಿದ ಅವಮಾನ’ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಹಾಸಭಾದ ಜಿಲ್ಲಾಧ್ಯಕ್ಷ ಕೆ.ಎನ್. ಪಾಟೀಲ, ಮುಖಂಡರಾದ ಸುರೇಶ ದೊಣ್ಣಿ, ಹನುಮಂತಪ್ಪ ಜೋಗದ ಹಾಗೂ ವೀರಭದ್ರಪ್ಪ ನಾಯಕ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ ‘ಪ್ರತಿ ಚುನಾವಣೆಯಲ್ಲಿ ಸಾಮೂಹಿಕ ಜವಾಬ್ದಾರಿ ಇರುತ್ತದೆ. ಹಾಗಿದ್ದರೂ ನಮ್ಮ ಸಮಾಜದ ರಾಮುಲು ಮೇಲೆ ಮಾತ್ರ ಯಾಕೆ ಸೋಲಿನ ಗೂಬೆ ಕೂರಿಸುತ್ತೀರಿ’ ಎಂದು ಪ್ರಶ್ನಿಸಿದರು. ಶಾಸಕ ಜನಾರ್ದನ ರೆಡ್ಡಿ ವಿರುದ್ಧವೂ ಆಕ್ರೋಶ ಹೊರ ಹಾಕಿದರು.
‘ರಾಮುಲು ಇಲ್ಲದೇ ಹೋಗಿದ್ದರೆ, ನಾಯಕ ಸಮುದಾಯ ಜೊತೆಗೆ ನಿಲ್ಲದಿದ್ದರೆ ಜನಾರ್ದನ ರೆಡ್ಡಿ ರಾಜಕೀಯವಾಗಿ ಎಲ್ಲಿರುತ್ತಿದ್ದರು? ರಾಮುಲು ಅವರ ಬಳಿ ಲಾಭ ತೆಗೆದುಕೊಂಡ ರೆಡ್ಡಿ ವಾಪಸ್ ಕೊಟ್ಟಿದ್ದೇನು? 2018ರ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಎದುರು ಸ್ಪರ್ಧೆ ಮಾಡಲು ಬಿಜೆಪಿಯಲ್ಲಿ ಯಾರೂ ಗಂಡಸರೇ ಇರಲಿಲ್ಲವೇ? ಆಗ ರಾಮುಲು ಬೇಕಾಯಿತು. ಈಗ ಯಾಕೆ ನಮ್ಮ ಸಮಾಜದ ನಾಯಕನಿಗೆ ಅವಮಾನ ಮಾಡಲಾಗುತ್ತಿದೆ. ಇದಕ್ಕಾಗಿ ರೆಡ್ಡಿ ಕ್ಷಮೆ ಕೋರಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.