ADVERTISEMENT

ಹೆಸರು ಬೆಳೆಗೆ ಹಳದಿ ರೋಗ

ಇಳುವರಿ ಕುಸಿತ ಭೀತಿಯಲ್ಲಿ ರೈತರು: ಕೃಷಿ ವಿಜ್ಞಾನಿಗಳಿಂದ ಸಲಹೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 3:19 IST
Last Updated 3 ಜುಲೈ 2021, 3:19 IST
ಅಳವಂಡಿ ಹೋಬಳಿ ವ್ಯಾಪ್ತಿಯ ಹೊಲವೊಂದರಲ್ಲಿ ಹಳದಿ ನಂಜಾಣು ರೋಗ ಬಾಧಿತ ಹೆಸರು ಬೆಳೆಯನ್ನು ಕೃಷಿ ಅಧಿಕಾರಿ ಯೋಗೇಶ ಪರಿಶೀಲಿಸಿದರು
ಅಳವಂಡಿ ಹೋಬಳಿ ವ್ಯಾಪ್ತಿಯ ಹೊಲವೊಂದರಲ್ಲಿ ಹಳದಿ ನಂಜಾಣು ರೋಗ ಬಾಧಿತ ಹೆಸರು ಬೆಳೆಯನ್ನು ಕೃಷಿ ಅಧಿಕಾರಿ ಯೋಗೇಶ ಪರಿಶೀಲಿಸಿದರು   

ಅಳವಂಡಿ: ಹೋಬಳಿ ವ್ಯಾಪ್ತಿಯ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಹೆಸರು ಬಿತ್ತನೆಮಾಡಿದ್ದು, ಹಳದಿ ನಂಜಾಣು ರೋಗ ಕಾಣಿಸಿಕೊಂಡಿರುವುದರಿಂದ ರೈತರಲ್ಲಿ ಆತಂಕ ಮನೆಮಾಡಿದೆ.

ಹೆಸರು ಬೆಳೆಯ ಎಲೆಯ ಮೇಲೆ ಹಳದಿ ಬಣ್ಣದ ಚುಕ್ಕೆಗಳು ಕಂಡು ಬರುತ್ತಿದ್ದು, ನಂತರಜಮೀನಿನಲ್ಲಿ ಬಿತ್ತಿದ ಹೆಸರು ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ಇಳುವಾರಿ ಬಾರದೇ ನಾಶವಾಗುವ ಅಪಾಯವಿದೆ. ಹೂವುಗಳು ಕೂಡ ಕಡಿಮೆ ಸಂಖ್ಯೆಯಲ್ಲಿ ಬಿಟ್ಟು ಕಾಯಿ ಆಗದೇ ಶೇ 60ರಷ್ಟು ಬೆಳೆ ನಾಶವಾಗುವ ಭೀತಿ ಇದೆ.

ಹಳದಿ ನಂಜಾಣು ರೋಗಕ್ಕೆ ಹುಳು-ಕೀಟ ವೈಟ್ ಪ್ಲೇ (ಬಿಳಿನೊಣ)ಕಾರಣವಾಗಿದ್ದು,ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹೋಗಿ ರಸ ಹೀರುವುದರಿಂದ ಈ ವೈರಾಣು ಗಿಡದಿಂದ ಗಿಡಕ್ಕೆ ಹರಡುತ್ತದೆ. ಇದನ್ನು ಪ್ರಾರಂಭದಲ್ಲೇ ನಿಯಂತ್ರಿಸಿದರೆ ಉತ್ತಮ ಫಸಲು ಬರಲು ಸಾಧ್ಯ ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.

ADVERTISEMENT

ಹೊಲದಲ್ಲಿ ರೋಗ ಕಾಣಿಸಿಕೊಂಡ ಗಿಡಗಳನ್ನು ತಕ್ಷಣ ರೈತರು ಕಿತ್ತು ನೆಲದಲ್ಲಿ ಹೂಳಬೇಕು ಅಥವಾ ಸುಡಬೇಕು. ಪ್ರಾರಂಭದಲ್ಲೇ ಕೀಟನಾಶಕ ಬಳಕೆ ಮಾಡಬೇಕು. ಡೈಮಿಥೋಯೆಟ್ 1.5 ಮಿ.ಲೀ ಪ್ರತಿ ಲೀಟರ್ ಅಥವಾ ಇಮಿಡಾಕ್ಲೋವಿಡ್ 1 ಮಿ.ಲೀ, 1 ಲೀಟರ್ ನೀರಿಗೆ ಬೆರೆಸಿ ಗಿಡಗಳಿಗೆ ಸಿಂಪಡಿಸಬೇಕು ಹಾಗೂ ಹಳದಿ ಅಂಟು ಬಲೆಯನ್ನು1 ಎಕರೆ ಪ್ರದೇಶದಲ್ಲಿ ಆರು ಕಡೆ ಅಳವಡಿಸಬೇಕು. ಇದನ್ನು ಮಾಡಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ.

ರೈತ ಸಂಪರ್ಕ ಕೇಂದ್ರದ ಎಎಒ ಯೋಗೇಶ ಕಾಟ್ರಳ್ಳಿ ಮಾತನಾಡಿ,‘ಹೆಸರು ಬೆಳೆಗೆ ಹಳದಿ ನಂಜಾಣು ರೋಗ ಕಾಣಿಸಿಕೊಂಡರೆ ಔಷಧ ಸಿಂಪಡಣೆ ಮಾಡುವ ಮೂಲಕ ನಿಯಂತ್ರಣಕ್ಕೆ ತರಬೇಕು. ಇಲ್ಲದಿದ್ದರೆ ಇಳುವರಿ ಕುಂಠಿತವಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.