
ಕೊಪ್ಪಳದಲ್ಲಿ ಬುಧವಾರ ಕರ್ನಾಟಕ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಕೊಪ್ಪಳ: ಕರ್ನಾಟಕ ನವನಿರ್ಮಾಣ ಸೇನೆಯ ಕಾರ್ಯಕರ್ತರು ಬುಧವಾರ ಇಲ್ಲಿನ ಕನಕದಾಸ ವೃತ್ತದಿಂದ ನಗರಸಭೆ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ ಕನ್ನಡದಲ್ಲಿಯೇ ಕಡ್ಡಾಯವಾಗಿ ನಾಮಫಲಕ ಹಾಕಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
‘ರಾಜ್ಯ ಸರ್ಕಾರದ ಆದೇಶದಂತೆ ನಗರಸಭೆ ಹಾಗೂ ಇನ್ನಿತರ ಇಲಾಖೆಗಳಿಂದ ಪರವಾನಗಿ ಪಡೆದು ನಗರಗಳಲ್ಲಿ ವಹಿವಾಟು ನಡೆಸುತ್ತಿರುವ ಖಾಸಗಿ ಆಸ್ಪತ್ರೆ, ಖಾಸಗಿ ಶಾಲಾ–ಕಾಲೇಜು ಹಾಗೂ ಕೈಗಾರಿಕೆ ಸೇರಿ ಎಲ್ಲಾ ವ್ಯಾಪಾರಸ್ಥರಿಗೆ ಪರವಾನಗಿಯಲ್ಲಿ ಆದೇಶ ಪಾಲಿಸುವಂತೆ ಸೂಚಿಸಬೇಕು’ ಎಂದು ಆಗ್ರಹಿಸಿದರು.
‘ನಗರದ ಹಲವು ವ್ಯಾಪಾರಸ್ಥರು ತಮ್ಮ ಅಂಗಡಿಗಳ ನಾಮಫಲಕವನ್ನು ಆಂಗ್ಲ ಭಾಷೆಯಲ್ಲಿ ಹಾಕಿದ್ದಾರೆ. ಅಂಥವರಿಗೆ ದಂಡ ವಿಧಿಸಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ವಿಜಯಕುಮಾರ ಕವಲೂರ, ತಾಲ್ಲೂಕು ಅಧ್ಯಕ್ಷ ಮಹೇಶ ಅಲ್ಲನಗರ, ಮಹಿಳಾ ಘಟಕದ ಅಧ್ಯಕ್ಷೆ ರಾಜಮ್ಮ ಓಜನಹಳ್ಳಿ, ಜಿ.ಎಸ್.ಗೋನಾಳ, ಶಿವಮ್ಮ, ಸುಜಾತ ತಳಕಲ್, ರಾಜಾ ಹುಸೇನಿ, ಮಂಜುನಾಥ ಪಾಟೀಲ, ಮಂಜುನಾಥ ಭಜಂತ್ರಿ, ಮರಿಯಪ್ಪ ಮಂಗಳೂರು, ನರಸಮ್ಮ, ಆನಂದ ಮಡಿವಾಳರ ಹಾಗೂ ತಿಮ್ಮನಗೌಡ ಪಾಟೀಲ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.