ADVERTISEMENT

ಬಾಕಿ ವೇತನ ಪಾವತಿಗೆ ಆಗ್ರಹ: ಬಿಸಿಯೂಟ ತಯಾರಕರ ಪ್ರತಿಭಟನೆ

ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 5:14 IST
Last Updated 20 ಸೆಪ್ಟೆಂಬರ್ 2022, 5:14 IST
ಕೊಪ್ಪಳದಲ್ಲಿ ಸೋಮವಾರ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು
ಕೊಪ್ಪಳದಲ್ಲಿ ಸೋಮವಾರ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು   

ಕೊಪ್ಪಳ: ಬಾಕಿ ಉಳಿದ ನಾಲ್ಕು ತಿಂಗಳ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ಸೋಮವಾರ ತಾಲ್ಲೂಕಿನ ಬಿಸಿಯೂಟ ತಯಾರಕ ಮಹಿಳೆಯರು, ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಪ್ರತಿಭಟನಾ ನಿರತರು ಕೆಲಸ ನಿರ್ವಹಿಸುವ ವೇಳೆ ಸುಡುವ ಅನ್ನದ ಗಂಜಿಯಲ್ಲಿ ಬಿದ್ದು ತೀವ್ರವಾದ ಸುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿರುವಕೊಪ್ಪಳತಾಲ್ಲೂಕಿನ ಬೊಚನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಸಿಬ್ಬಂದಿ ದೇವಮ್ಮ ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಆ ಮಹಿಳೆಗೆ ₹1 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ADVERTISEMENT

‘ಬಾಕಿ ಉಳಿದ ವೇತನ ಪಾವತಿಸುವಂತೆ ಆಗ್ರಹಿಸಿ ಒತ್ತಾಯಿಸಿ ಹಲವಾರು ಬಾರಿ ಹೋರಾಟ ಮಾಡಲಾಗಿದೆ. ನೇರವಾಗಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದರೂ ಸರ್ಕಾರ ವೇತನ ಪಾವತಿ ಮಾಡಿಲ್ಲ. ಕೆಲಸ ಮಾಡುವ ವೇಳೆ ಮಹಿಳೆಯರು ಅಪಘಾತ, ಅವಘಡಗಳಿಗೆ ಬಲಿಯಾದರೆ ಅವರಿಗೆ ಸರ್ಕಾರವೇ ನೆರವು ಕೊಡಬೇಕು.ಕನಿಷ್ಠ ವೇತನ, ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ನಿರ್ಗತಿಕ ಮಹಿಳೆಯರಿಗೆ ವಿವಿಧ ವಸತಿ ಯೋಜನೆ ಅಡಿಯಲ್ಲಿ ಮನೆಗಳನ್ನು, ನಿವೇಶನಗಳನ್ನು ಮಂಜೂರು ಮಾಡಬೇಕು. ಶಾಲೆಗಳಿಗೆ ಗುಣಮಟ್ಟದ ಆಹಾರ ಸಾಮಗ್ರಿಗಳ ಪೂರೈಕೆ ಮಾಡಬೇಕು‘ ಎನ್ನುವ ಬೇಡಿಕೆಗಳನ್ನು ಮುಂದಿಟ್ಟರು.

ಬಸವರಾಜ ಶೀಲವಂತರ, ಮುತ್ತು ಹಡಪದ, ನನ್ನೂಸಾಬ ನೀಲಿ, ಪುಷ್ಪಾ ಮೇಸ್ತ್ರಿ, ಲಲಿತಾ ಬೂದಗುಂಪಿ, ಖಾಜಾಬನಿ, ಸುಮಂಗಲಾ ಕೊತಬಾಳ, ಶಿವಮ್ಮ, ಪದ್ಮಾ ಹುಲಗಿ, ಸುಮಾ ಲಾಚನಕೇರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.