
ಕೊಪ್ಪಳ: ಸರ್ಕಾರಿ ಪದವಿಪೂರ್ವ ಕಾಲೇಜುಗಳ ಶೈಕ್ಷಣಿಕ ಚಟುವಟಿಕೆಗಳ ಸ್ಥಿತಿಗತಿ ಮಾಹಿತಿ ಸಂಗ್ರಹಿಸುವ ಮತ್ತು ಪರಿಶೀಲನೆ ಮಾಡುವ ಸುತ್ತೋಲೆಯನ್ನು ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ಶಿಕ್ಷಣ ಮತ್ತು ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ (ಡಿ.ಎಸ್.ಇ.ಆರ್.ಟಿ) ಇಲಾಖೆಗಳು ಇತ್ತೀಚೆಗೆ ಜಂಟಿಯಾಗಿ ಹೊರಡಿಸಿದ್ದು, ಇದನ್ನು ವಾಪಸ್ ಪಡೆಯಬೇಕು ಎಂದು ಪಿಯು ಉಪನ್ಯಾಸಕರು ಹಾಗೂ ಪ್ರಾಚಾರ್ಯರ ಸಂಘಗಳು ಒತ್ತಾಯಿಸಿವೆ.
‘ಕಾಲೇಜುಗಳ ಶೈಕ್ಷಣಿಕ ಹಾಗೂ ಇತರೆ ಸೌಕರ್ಯಗಳ ಪರಿಶೀಲನೆಗೆ ಅಭ್ಯಂತರವಿಲ್ಲ. ನಮ್ಮದೇ ಇಲಾಖೆಯ ಅಧಿಕಾರಿಗಳು, ಹಿರಿಯ ಪ್ರಾಚಾರ್ಯರು, ಉಪನ್ಯಾಸಕರಿಂದ ಪರಿಶೀಲನೆ ತಕರಾರಿಲ್ಲ. ಆದರೆ ನಮ್ಮ ಇಲಾಖೆಗೆ ಸಂಬಂಧವೇ ಇರದ ಡಯಟ್ ಅಧಿಕಾರಿಗಳು ಹಾಗೂ ಉಪನ್ಯಾಸಕರಿಂದ ಕಾಲೇಜುಗಳ ಪರಿಶೀಲನೆ ಯಾಕೆ’ ಎಂದು ಎರಡೂ ಸಂಘದವರು ಪ್ರಶ್ನಿಸಿದ್ದಾರೆ.
‘ಈ ಸುತ್ತೋಲೆಯು ಅವೈಜ್ಞಾನಿಕವಾಗಿದ್ದು ನೌಕರರಲ್ಲಿ ಅಭದ್ರತೆ ಕಾಡುತ್ತದೆ. ಕೂಡಲೇ ಇದನ್ನು ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು. ಡಿಡಿಪಿಯು ಜಿ.ಎಚ್. ಜಗದೀಶ ಅವರಿಗೆ ಮನವಿ ಸಲ್ಲಿಸಿದರು.
ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಸಪ್ಪ ನಾಗೋಲಿ, ಕಾರ್ಯದರ್ಶಿ ಬಸವರಾಜ, ಖಜಾಂಚಿ ಟಿ.ಸಿ.ಶಾಂತಪ್ಪ, ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರಗೌಡ, ಕಾರ್ಯಾಧ್ಯಕ್ಷ ಮಾರುತಿ ಲಕಮಾಪುರ, ಹಿರಿಯ ಪ್ರಾಚಾರ್ಯರಾದ ರಾಜಶೇಖರ ಪಾಟೀಲ, ಶಿವಾನಂದ, ಮಂಜುನಾಥ ಸ್ವಾಮಿ, ಉಪನ್ಯಾಸಕರಾದ ಸಿದ್ಧಲಿಂಗಪ್ಪ ಕೊಟ್ನೆಕಲ್, ರಾಚಪ್ಪ ಕೇಸರಬಾವಿ, ಕೆ.ಎಸ್.ಹುಲಿ, ಎಸ್.ವಿ.ಮೇಳಿ, ಕೆ.ಎಚ್.ಕೊಳ್ಳಣ್ಣನವರ, ಶಿವಾನಂದ ಮೇಟಿ, ಲಲಿತಮ್ಮಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.