ADVERTISEMENT

ಕೆರೆಹಳ್ಳಿ ದೇಗುಲ: ಬಂಡೆಯೇ ತಟ್ಟೆ!

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 6:37 IST
Last Updated 20 ಆಗಸ್ಟ್ 2020, 6:37 IST
ಮುನಿರಾಬಾದ್ ಸಮೀಪದ ಕೆರೆಹಳ್ಳಿ ಹೊರವಲಯದ ಗುಡ್ಡದ ಮೇಲಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರು ಬಂಡೆಗಲ್ಲಿನ ಮೇಲೆ ಊಟ ಮಾಡುತ್ತಿರುವುದು
ಮುನಿರಾಬಾದ್ ಸಮೀಪದ ಕೆರೆಹಳ್ಳಿ ಹೊರವಲಯದ ಗುಡ್ಡದ ಮೇಲಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರು ಬಂಡೆಗಲ್ಲಿನ ಮೇಲೆ ಊಟ ಮಾಡುತ್ತಿರುವುದು   

ಮುನಿರಾಬಾದ್: ಸಮೀಪದ ಕೆರೆಹಳ್ಳಿ ಗ್ರಾಮದ ಹೊರ ವಲಯದ ಗುಡ್ಡದ ಮೇಲಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಶ್ರಾವಣ ಮಾಸದಲ್ಲಿ ನೂರಾರು ಭಕ್ತರು ಬರುತ್ತಾರೆ. ಪೂಜೆಯಾದ ಬಳಿಕ ಬಂಡೆಗಲ್ಲಿನ ಮೇಲೆ ಊಟ ಮಾಡುತ್ತಾರೆ.

ಈ ಶ್ರಾವಣ ಕೊನೆ ಶನಿವಾರ ಕೆರೆಹಳ್ಳಿ, ಶಹಾಪುರ ಮತ್ತು ಬೂದಗುಂಪಾ ಗ್ರಾಮಗಳ ನೂರಾರು ಭಕ್ತರು ಬಂದಿದ್ದರು. ಆಂಜನೇಯ ಸ್ವಾಮಿಗೆ ಅಭಿಷೇಕ, ಭಜನೆ ಹಾಗೂ ವಿಶೇಷ ಪೂಜೆ ನೆರವೇರಿಸಿದರು.

ಮಳೆಯನ್ನೂ ಲೆಕ್ಕಿಸದೇ ಭಕ್ತರು ಬಂಡೆಗಲ್ಲಿನ ಮೇಲೆ ಕುಳಿತು ಬೂಂದಿ ಲಾಡು ಹಾಗೂ ಅನ್ನ, ಸಾಂಬಾರು ಸವಿದರು.

ADVERTISEMENT

ಇಲ್ಲಿ ಊಟಕ್ಕೆ ತಟ್ಟೆ, ಲೋಟಗಳಿಲ್ಲ ದೊಡ್ಡದಾದ ಹಾಸು ಬಂಡೆಯೇ ತಟ್ಟೆ!. ತಂದೆ-ಮಕ್ಕಳು, ತಾತ-ಮೊಮ್ಮಗ, ಸ್ನೇಹಿತರು ಒಂದೇ ಕಡೆ ಕುಳಿತು ಸಾಮೂಹಿಕ ಭೋಜನ ಸವಿಯುತ್ತಾರೆ.

‘ಶ್ರಾವಣ ಶನಿವಾರ ಬಂಡೆ ಮೇಲೆ ಊಟ ಮಾಡುವುದು. ದೇವಸ್ಥಾನದ ಹತ್ತಿರ ಸಂಗ್ರಹವಾದ ನೀರನ್ನು ಕುಡಿಯುವುದು ಹಲವು ವರ್ಷಗಳಿಂದ ನಡೆದು ಬಂದ ಸಂಪ್ರದಾಯ’ ಎಂದು ತಿಳಿಸುತ್ತಾರೆ ಸಿದ್ದರಾಮಪ್ಪ ಭಟ್ಟ, ಅರ್ಚಕರಾದ ದೇವಪ್ಪ, ವಸಂತ ಕೆರೆಹಳ್ಳಿ, ಹನುಮಪ್ಪ ಉಪ್ಪಾರ, ಕಲ್ಲಪ್ಪ ತಳವಾರ, ಈರಪ್ಪ ಗುರಿಕಾರ, ಸೋಮಪ್ಪ ವಾಲ್ಮೀಕಿ, ರಾಮಚಂದ್ರಪ್ಪ ಗುರಿಕಾರ, ಈರಣ್ಣ ಕೋಮಲಾಪುರ, ನಿಂಗಪ್ಪ ಎಮ್ಮಿ, ನಾಗರಾಜ ಹಳ್ಳಿಗುಡಿ ಹಾಗೂ ಶ್ರೀನಿವಾಸ ಅವರು. ‘ಯಾವುದೇ ಹಿಂಜರಿಕೆ, ಭೇದ–ಭಾವ ಇಲ್ಲದೇ ಸಾಮೂಹಿಕ ಭೋಜನ ಮಾಡುವ ಭಕ್ತರನ್ನು ಒಂದೇ ಕಡೆ ಕಂಡೆವು’ ಎನ್ನುತ್ತಾರೆ ಹುಲಿಗಿಯ ಉಪನ್ಯಾಸಕ ಬಸವರಾಜ ಮೇಟಿ ಹಾಗೂ ಮರಿಸ್ವಾಮಿ ನಾಗಲೀಕರ್ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.