ನವಲಿ (ಕನಕಗಿರಿ): ಇಲ್ಲಿಗೆ ಸಮೀಪದ ನವಲಿ ಗ್ರಾಮದ ಭೋಗಾಪುರೇಶ ದೇವರ ರಥೋತ್ಸವ ಸೋಮವಾರ ನಸುಕಿನ ಜಾವ ಸೀಮಿತ ಭಕ್ತರ ಮಧ್ಯೆ ನಡೆಯಿತು.
ಅಂದಾಜು ₹40 ಲಕ್ಷ ವೆಚ್ಚದಲ್ಲಿ ಹೊಸ ತೇರು ನಿರ್ಮಾಣ ಮಾಡಲಾಗಿತ್ತು. ಕಳೆದ ವರ್ಷ ಕೊರೊನಾ ಭೀತಿಯಿಂದ ತೇರು, ಜಾತ್ರೆಗಳನ್ನು ಸರ್ಕಾರ ರದ್ದುಗೊಳಿಸಿದ ಕಾರಣ ರಥೋತ್ಸವ ನಡೆದಿರಲಿಲ್ಲ.
ಬೆಳಿಗ್ಗೆ ದೇವಸ್ಥಾನದಲ್ಲಿ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪ್ರಸಾದ ಇತರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆದವು.
ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ, ನೈವೇದ್ಯ, ಹೂವಿನ ಹಾರ, ಇತರ ಸಾಮಗ್ರಿಗಳನ್ನು ಭಕ್ತಿಯಿಂದ ಸಮರ್ಪಿಸಿದರು.
ಧ್ವಜ ಹಾಗೂ ಕಾಯಿಯನ್ನು ಪ್ರಮುಖರ ಮನೆಯಿಂದ ಮೆರವಣಿಗೆ ಮೂಲಕ ದೇವಸ್ಥಾನದ ವರೆಗೆ ತರಲಾಯಿತು. ಭಕ್ತರು ದೇವಸ್ಥಾನದಿಂದ ಪಾದಗಟ್ಟೆ ವರೆಗೆ ರಥ ಎಳೆದು ಸಂಭ್ರಮಿಸಿದರು. ಹೂವು, ಬಾಳೆಹಣ್ಣು, ಉತ್ತುತ್ತಿ ತೇರಿನತ್ತ ಎಸೆದರು. ವೇದ ಮಂತ್ರಗಳ ಘೋಷಣೆ ಮುಗಿಲು ಮುಟ್ಟಿತ್ತು. ಭಕ್ತರು ದೀವಟಿಗೆ ಹಿಡಿದು ಭಕ್ತಿ ಮೆರೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.