ADVERTISEMENT

ವಿಜಯಿ ಗಣಪತಿ ದೇವಸ್ಥಾನದ24ನೇ ವಾರ್ಷಿಕೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 4:12 IST
Last Updated 18 ಏಪ್ರಿಲ್ 2021, 4:12 IST
ಗರ್ಭಗುಡಿಯಲ್ಲಿನ ವಿಜಯಿಗಣಪತಿ ವಿಗ್ರಹ
ಗರ್ಭಗುಡಿಯಲ್ಲಿನ ವಿಜಯಿಗಣಪತಿ ವಿಗ್ರಹ   

ಟಿ.ಬಿ.ಡ್ಯಾಮ್ (ಮುನಿರಾಬಾದ್): ಇಲ್ಲಿನ ತುಂಗಭದ್ರಾ ನದಿ ತೀರದ ಬೆನಕ, ವಿಜಯಿ ಗಣಪತಿ ದೇವಸ್ಥಾನ ಪುನರುಜ್ಜೀವನದ 24ನೇ ವಾರ್ಷಿಕೋತ್ಸವ ಶುಕ್ರವಾರ ಸಾಂಗವಾಗಿ ನೆರವೇರಿತು.

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ–50ರಲ್ಲಿ ತುಂಗಭದ್ರಾ ನದಿತೀರದ, ಪವರ್ ಕಾಲುವೆ ದಡದಲ್ಲಿರುವ ಪ್ರದೇಶ ಈ ಮೊದಲು ಹೊಸಕೋಟೆ ಎಂದು ಕರೆಯಲ್ಪಡುತ್ತಿತ್ತು. ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾದ ಸುಂದರವಾದ ಕೆತ್ತನೆಯ ಗಣಪತಿ ದೇವಸ್ಥಾನದಲ್ಲಿ ಆಕರ್ಷಕ ಗಣಪತಿ ವಿಗ್ರಹ ಇದೆ. ವಿಜಯನಗರ ಅರಸರು ಯುದ್ಧಕ್ಕೆ ಹೋಗುವ ಮುನ್ನ ಯುದ್ಧದಲ್ಲಿ ವಿಜಯ ಸಿಗಲಿ ಎಂದು ಈ ವಿಜಯಿ ಗಣಪತಿಯ ದರ್ಶನ ಪಡೆದು ಯುದ್ಧಕ್ಕೆ ಹೊರಡುತ್ತಿದ್ದರು ಎಂಬ ಪ್ರತೀತಿಯಿದೆ.

ತುಂಗಭದ್ರಾ ಜಲಾಶಯ ನಿರ್ಮಾಣ ವೇಳೆನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪುರಾತನ ದೇಗುಲದಲ್ಲಿ ಕಾಲುವೆಗಾಗಿ ತೆಗೆದ ಮಣ್ಣು ದೇಗುಲದಲ್ಲಿ ತುಂಬಿಹೋಗಿತ್ತು. ಹೊಸಪೇಟೆ ಮತ್ತು ಟಿ.ಬಿ. ಡ್ಯಾಮ್ ನ ಕೆಲ ಇತಿಹಾಸ ಪ್ರಿಯರ ಪ್ರಯತ್ನದಿಂದ ಪುರಾತನ ದೇವಾಲಯ ಬೆಳಕಿಗೆ ಬಂದಿದೆ.

ADVERTISEMENT

ಸದ್ಯ ಇಲ್ಲಿ ಅರ್ಚಕರಾಗಿರುವ ಹನುಮಂತಪ್ಪ ಗುಜ್ಜಲ 24 ವರ್ಷಗಳಿಂದ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ವಿಶಾಲ ದೇವಾಲಯದ ಅವರಣದಲ್ಲಿ ನವಗ್ರಹ, ಆಂಜನೇಯ, ಈಶ್ವರ, ದತ್ತಾತ್ರೇಯ, ಇಟಗಿ ಭೀಮಾಂಬಿಕಾ ದೇವಿ ಮತ್ತು ವಾಲ್ಮೀಕಿ ಸಣ್ಣ ದೇವಾಲಯಗಳು ನಿರ್ಮಾಣಗೊಂಡವು ಎಂದು ತಿಳಿದು ಬರುತ್ತದೆ. ಶುಕ್ರವಾರ ದೇವಸ್ಥಾನದಲ್ಲಿ ಸಹಸ್ರ ಮೋದಕ ಗಣಹೋಮ, ನವಗ್ರಹ ಹೋಮ, ರುದ್ರ ಸ್ವಾಹಕಾರ, ದತ್ತ ಗಾಯತ್ರಿ ಮತ್ತು ಪವನ ಹೋಮ ಶ್ರದ್ಧಾಭಕ್ತಿಯಿಂದ ನೆರವೇರಿದವು. ದೇವರಿಗೆ ವಸ್ತ್ರಾಲಂಕಾರ ಮತ್ತು ಪುಷ್ಪಾಲಂಕಾರದೊಂದಿಗೆ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.