ಕುಷ್ಟಗಿ: ‘ದೇಶವನ್ನು ಸುಭದ್ರವಾಗಿ ಮುನ್ನಡೆಸುವ ನಿಟ್ಟಿನಲ್ಲಿ ವಕೀಲರು ಸೇರಿದಂತೆ ಎಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇನ್ನಷ್ಟು ಶಕ್ತಿ ತುಂಬುವ ಅಗತ್ಯವಿದೆ’ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಮಂಗಳವಾರ ಇಲ್ಲಿನ ತಾಲ್ಲೂಕು ವಕೀಲರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಲೋಕಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಅವರನ್ನು ಬೆಂಬಲಿಸುವಂತೆ ವಕೀಲರಲ್ಲಿ ಮನವಿ ಮಾಡಿದ ಅವರು ‘ಬಸವರಾಜ ಯುವಕರಾಗಿದ್ದಾರೆ, ಅವರ ಗೆಲುವು ದೇಶದ ಅಭಿವೃದ್ಧಿಯ ಜೊತೆಗೆ ಜಿಲ್ಲೆಯ ಪ್ರಗತಿಗೂ ಪೂರಕವಾಗಲಿದೆ’ ಎಂದರು.
ಬಸವರಾಜ ಕ್ಯಾವಟರ ಮಾತನಾಡಿ ‘ದೇಶವನ್ನು ಸಮೃದ್ಧಿಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಸಂಕಲ್ಪಿಸಿರುವ ಪ್ರಧಾನಿ ಮೋದಿ ಅವರು ದೇಶದಲ್ಲಿ ಈ ಬಾರಿ ವೈದ್ಯರು, ವಕೀಲರು, ಎಂಜಿನಿಯರ್ಗಳು ಸೇರಿದಂತೆ ಅನೇಕ ಕ್ಷೇತ್ರಗಳ ಜನರನ್ನು ಗುರುತಿಸಿ ಅವರಲ್ಲಿನ ಕೌಶಲವನ್ನು ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ವಿಶೇಷ ಅವಕಾಶ ಕಲ್ಪಿಸಿದ್ದಾರೆ. ತಾವು ಗೆದ್ದರೆ ಇತರೆ ಜಿಲ್ಲೆಗಳ ಮಾದರಿಯಲ್ಲಿ ಕೊಪ್ಪಳವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತೇನೆ. ಹಾಗಾಗಿ ತಮ್ಮನ್ನು ಬೆಂಬಲಿಸಿ’ ಎಂದು ಮನವಿ ಮಾಡಿದರು.
ವಕೀಲರಾದ ಫಕೀರಪ್ಪ ಚಳಗೇರಿ, ಎಚ್.ಬಿ.ಕುರಿ, ರಾಜು ಗಂಗನಾಳ, ವಕೀಲರ ಸಂಘದ ಅಧ್ಯಕ್ಷ ವಿಜಯಮಹಾಂತೇಶ ಕುಷ್ಟಗಿ ಮಾತನಾಡಿದರು. ಉಪಾಧ್ಯಕ್ಷ ಶಿವಕುಮಾರ ದೊಡ್ಡಮನಿ, ಬಸವರಾಜ ಲಿಂಗಸೂರು, ಎ.ಎಚ್.ಪಲ್ಲೇದ, ವಿ.ಎಚ್.ಈಳಗೇರ, ಬಸವರಾಜ ಇದ್ಲಾಪುರ, ರುದ್ರಯ್ಯ ಗುರುಮಠ, ಸಿ.ಪಿ.ಪಾಟೀಲ ಸೇರಿದಂತೆ ಅನೇಕ ವಕೀಲರು, ಪ್ರಮುಖರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.