ಕನಕಗಿರಿ: ಬೇಸಿಗೆಯಲ್ಲಿ ಕೂಲಿಕಾರರು ಗುಳೆ ಹೋಗದೇ ತಮ್ಮ ಊರಲ್ಲಿಯೇ ನರೇಗಾ ಯೋಜನೆಯಡಿ ಕೆಲಸ ಮಾಡುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ಶರಪೊನ್ನಿಸಾ ಬೇಗಂ ಹೇಳಿದರು.
ತಾಲ್ಲೂಕಿನ ಹಿರೇಖೇಡ ಗ್ರಾಮದಲ್ಲಿ ನಡೆದ ಕೆರೆ ಹೂಳೆತ್ತುವ ಕೆಲಸದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ನರೇಗಾ ಕೂಲಿಕಾರರಿಗೆ ಬೇಸಿಗೆ ಇರುವ ಕಾರಣ ಸತತ ಮೂರು ತಿಂಗಳ ಕಾಲ ಗ್ರಾ.ಪಂ ವತಿಯಿಂದ ಕೆಲಸ ನೀಡಲಾಗುತ್ತದೆ. ಅಲ್ಲದೇ, ಪ್ರತಿನಿತ್ಯ ತಮಗೆ ನೀಡಿರುವ ಕೆಲಸದ ಅಳತೆಗನುಸಾರವಾಗಿ ಕೆಲಸ ಮಾಡಿದರೆ ಪೂರ್ತಿ ಕೂಲಿ ಹಣ ಸಿಗಲಿದೆ ಎಂದರು.
ಇದೇ ಸಮಯದಲ್ಲಿ ನರೇಗಾ ಸಹಾಯವಾಣಿ ಸಂಖ್ಯೆ, ಪಿಎಂಜೆಜೆವೈ ಹಾಗೂ ಪಿಎಂಎಸ್ಬಿವೈ ಯೋಜನೆಗಳ ಕುರಿತು ಮಾಹಿತಿಯನ್ನು ನೀಡಿದರು.
ಐಇಸಿ ಸಂಯೋಜಕ ಶಿವಕುಮಾರ ಕೆ. ಮಾತನಾಡಿ, ‘ಏ.1ರಿಂದ ಪರಿಷ್ಕೃತ ನರೇಗಾ ಕೂಲಿ ಮೊತ್ತ ₹349 ರಿಂದ ₹370ಗೆ ಹೆಚ್ಚಳವಾಗಿದೆ’ ಎಂದು ತಿಳಿಸಿದರು.
ತಾಂತ್ರಿಕ ಸಂಯೋಜಕ ಸಯ್ಯದ್ ತನ್ವೀರ್ ಮಾತನಾಡಿದರು.
ಗ್ರಾ.ಪಂ ಸದಸ್ಯರಾದ ಬಾರಿಮರದಪ್ಪ, ಭೀಮನಗೌಡ, ಪ್ರಮುಖರಾದ ಹುಲುಗಪ್ಪ ದೊಡ್ಡಮನಿ, ಬಾರಿಮರದಪ್ಪ ನಡುಲಮನಿ, ಶಾಮಣ್ಣ ಶಿರವಾರ, ಶಿವಕುಮಾರ್ ಬಡಿಗೇರ್, ಭೀಮನಗೌಡ ಗುಡದೂರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.