ಕೊಪ್ಪಳ: ‘ನಾಟಕ ಅತ್ಯಂತ ಪ್ರಾಚೀನವಾದ ಕಲೆ. ರಂಗಭೂಮಿ ಕಲಾವಿದರು ಈ ನಾಡಿನ ಸಂಪತ್ತು. ಲಲಿತ ಕಲೆಗಳಲ್ಲಿ ‘ನಾಟಕ’ ಒಂದಾಗಿದ್ದು, ಇದು ಕಾವ್ಯಕಲೆಗಿಂತಲೂ ಹೆಚ್ಚಿನ ಆನಂದವನ್ನು ನೀಡುತ್ತದೆ’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನುಮಂತಪ್ಪ ಅಂಡಗಿ ಹೇಳಿದರು.
ನಗರದ ಗದಗ ರಸ್ತೆಯ ಟಿ.ಎ.ಪಿ.ಎಂ.ಎಸ್. ಜಾಗದಲ್ಲಿ ಕೆ.ಬಿ.ಆರ್.ಡ್ರಾಮಾ ಕಂಪನಿ ವತಿಯಿಂದ ಹಮ್ಮಿಕೊಂಡಿದ್ದ ‘ನಿದ್ದಿಗೆಡಿಶ್ಯಾಳ ಬಸಲಿಂಗಿ’ ನಾಟಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಅಂತೆಯೇ ‘ಕಾವೇಷು ನಾಟಕಂ ರಮ್ಯಂ’ ಎಂದು ಕರೆದಿದ್ದಾರೆ. ಕನ್ನಡ ಭಾಷೆಯ ಉಳಿವು, ಬೆಳವಣಿಗೆಯಲ್ಲಿ ಮತ್ತು ಸ್ವಾತಂತ್ರ್ಯ ಆಂದೋಲನದಲ್ಲಿ ರಂಗಭೂಮಿಯ ಪಾತ್ರ ವಿಶಿಷ್ಟವಾದುದಾಗಿದೆ. ನಾಟಕಗಳು ಜನರನ್ನು ಸುಂಸ್ಕೃತರನ್ನಾಗಿ ಮಾಡುತ್ತವೆ. ಅವುಗಳು ದುಃಖದಿಂದ ಕುಗ್ಗಿದವರಿಗೆ, ಸಂತೋಷದಿಂದ ಹಿಗ್ಗಿದವರಿಗೆ, ಶ್ರಮದಿಂದ ಬಳಲಿದವರಿಗೆ ಸಾಂತ್ವನ ನೀಡುತ್ತವೆ’ ಎಂದರು.
ಗುಬ್ಬಿವೀರಣ್ಣ ಪ್ರಶಸ್ತಿ ಪುರಸ್ಕೃತರಾದ ಚಿಂದೋಡಿ ಶ್ರೀಕಂಠೇಶ ಅವರು ಕೆ.ಬಿ.ಆರ್.ಡ್ರಾಮಾ ಕಂಪನಿಯ ಮಾಲೀಕರಾಗಿ, ನಟರಾಗಿ, ನಿರ್ದೇಶಕರಾಗಿ, ನಾಟಕ ರಚನೆಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಕ್ಕಳಾದ ಚಿಂದೋಡಿ ವಿಜಯಕುಮಾರ, ಚಿಂದೋಡಿ ಕಿಶೋರಕುಮಾರ ಸೇರಿದಂತೆ ಇಡೀ ಕುಟುಂಬವೇ ರಂಗಭೂಮಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದೆ ಎಂದು ಹೇಳಿದರು.
ನಿಂಗಮ್ಮ ಸಂಗಣ್ಣ ಕರಡಿ, ಖುಷಿ ಗವಿಸಿದ್ಧಪ್ಪ ಕರಡಿ ಕಾರ್ಯಕ್ರಮ ಉದ್ಘಾಟಿಸಿದರು. ಭಾಗೀರಥಿಬಾಯಿ ಶಂಕರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹೇಮಲತಾ ನಾಯಕ,ಸುನಂದಾ ಕೆ.ಪಂಡಿತ ಮಾತನಾಡಿದರು.
ಕುಕನೂರಿನ ಅನ್ನದಾನೇಶ್ವರ ಶಾಖಾಮಠದ ಡಾ.ಮಹಾದೇವ ದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ ಮಧುರಾ ಕರಣಂ, ಚಿಂದೋಡಿ ಶ್ರೀಕಂಠೇಶ, ಚಿಂದೋಡಿ ಶಂಭುಲಿಂಗಪ್ಪ ಹಾಗೂ ಲಕ್ಷ್ಮಣ ಪೀರಗಾರಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.