ಅಳವಂಡಿ: ಸತತ ಬರಗಾಲ, ಬಿಸಿಲನ್ನೇ ಹಾಸಿ ಹೊದ್ದಿರುವ ಅಳವಂಡಿ ಹೋಬಳಿಯಲ್ಲಿ ಸಾರ್ವಜನಿಕರು, ಸಂಘ, ಸಂಸ್ಥೆಗಳು ಹಸರೀಕಣಕ್ಕೆ ಸದ್ದಿಲ್ಲದೆ ತಮ್ಮ ಕಾರ್ಯ ಮಾಡುತ್ತಾ ಸಾಗಿರುವುದು ಮೆಚ್ಚುಗೆ ಗಳಿಸಿದೆ.
ಸಮೀಪದ ಬೇಟಗೇರಿ-ಹುನಕುಂಟಿ ಗ್ರಾಮದ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣ ಹಸಿರಿನಿಂದ ಕಂಗೊಳಿಸುತ್ತಿದ್ದು, ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ. ಈ ಶಾಲೆ 2005-06 ಕೊಪ್ಪಳ ನಗರದಲ್ಲಿ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾಗಿ 2010-11ನೇ ಸಾಲಿನಲ್ಲಿ ಹುನಕುಂಟಿ ಗ್ರಾಮದ ಹೊರವಲಯದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.
ಶಾಲಾಆರಂಭವಾದಾಗ ಇದುಬರಡು ಭೂಮಿ. ಶಾಲೆಯ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯ ಉತ್ಸಾಹ, ಕ್ರಿಯಾಶೀಲತೆಯಿಂದ ಇಂದು ಹಸಿರು ಪರಿಸರ ಪಡೆಯುವಂತೆ ಆಗಿದೆ.ಶಾಲಾ ಆವರಣದಲ್ಲಿ ವಿವಿಧ ನಮೂನೆಯ ಸುಮಾರು ನೂರಾರು ಗಿಡಗಳನ್ನು ಬೆಳೆಸಲಾಗಿದೆ. ಮೂಲ ಸೌಕರ್ಯದೊಂದಿಗೆ ಹಸಿರು ವಾತವರಣ, ಸ್ವಚ್ಛತೆ, ಶಿಸ್ತು, ಗಿಡಮರ, ನೆಲ, ಜಲ ಸಂರಕ್ಷಣೆ ಬಗ್ಗೆ ಭದ್ರ ಬುನಾದಿ ಹಾಕುವ ಮೂಲಕ ಖಾಸಗಿ ಶಾಲೆಯನ್ನು ನೆನಪಿಸುವಂತೆ ಮಾಡಿದೆ.
ತೆಂಗು, ಪೇರಲ, ಹುಣಸೆ, ಬಾದಾಮಿ, ನೇರಳೆ, ಹತ್ತಿಗಿಡ, ಅಶೋಕ,ಬೇವು, ಹೂವಿನ ಗಿಡಗಳನ್ನು ನೆಡುವ ಮೂಲಕ ಪರಿಸರ ಪ್ರೇಮ ಮೆರೆಯಲಾಗಿದೆ. ಶಾಲಾ ಆವರಣದಲ್ಲಿ ಹುಲ್ಲು ಬೆಳೆಸಲಾಗಿದ್ದು, ಗಿಡಗಳ ಸುತ್ತ ಕಳೆ ತೆಗೆದು ಸ್ವಚ್ಛ ವಾತರಣ ನಿರ್ಮಿಸಲಾಗಿದೆ. ಅರಣ್ಯ ಇಲಾಖೆ ಮಾಡಬೇಕಾದ ಕಾರ್ಯವನ್ನು ಇಲ್ಲಿನ ಶಿಕ್ಷಕರು ಮಾಡುತ್ತಾ ಬಂದಿದ್ದಾರೆ.
ನಿಲಯದ ಮೇಲ್ವಿಚಾರಕ ಮತ್ತು ಪ್ರಾಚಾರ್ಯಮಂಜುನಾಥ ಬೇಳೂರುಮಾರ್ಗದರ್ಶನದಲ್ಲಿ ಜನಪ್ರತಿನಿಧಿಗಳು, ದಾನಿಗಳ ಮನವೊಲಿಸಿ ಪರಿಸರ ಜಾಗೃತಿ ಕಾರ್ಯಕ್ರಮ, ಭಾಷಣ,ಪ್ರಬಂಧ ಸ್ಪರ್ಧೆ ಏರ್ಪಡಿಸುವ ಮೂಲಕ ಹಸಿರು ವಾತಾವರಣಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.