ಅಳವಂಡಿ: ಸಮೀಪದ ಮೈನಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಸೋಶಿಯೇಶನ್ ಆಫ್ ನವೋದಯನ್ಸ್ ಕುಕನೂರು ಸಹಯೋಗದಲ್ಲಿ ಪ್ರವೇಶಾತಿ ಪರೀಕ್ಷೆಯ ಕುರಿತು ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕುಕನೂರಿನ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರಾದ ಜಯಾ ಮಾತನಾಡಿ, ‘ನವೋದಯ ವಿದ್ಯಾಲಯದಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ. ನವೋದಯ ವಿದ್ಯಾಲಯದಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅದೇ ರೀತಿ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಉತ್ತಮ ಅಭ್ಯಾಸ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು’ ಎಂದರು. ನಂತರ ಮಕ್ಕಳು ಪರೀಕ್ಷೆ ಎದುರಿಸುವ ಬಗ್ಗೆ ತಿಳಿಸಿದರು.
ಬೆಟಗೇರಿ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿ ಬಸವರಾಜ ಮಾತನಾಡಿ, ‘ನವೋದಯ ವಿದ್ಯಾಲಯದಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರೆ ಅವರ ಅಭ್ಯಾಸಕ್ಕೆ ಅನುಕೂಲವಾಗಿದೆ ಮತ್ತು ಉತ್ತಮ ಮಾರ್ಗದರ್ಶನ ಸಿಗುತ್ತದೆ’ ಎಂದರು.
ಹಳೆಯ ವಿದ್ಯಾರ್ಥಿಗಳಾದ ಶರಣಪ್ಪ ಹಾಗೂ ವೀರಯ್ಯ ವಿದ್ಯಾಲಯದಲ್ಲಿನ ತಮ್ಮಅನುಭವಗಳನ್ನು ಹಂಚಿಕೊಂಡರು.
ಮುಖ್ಯ ಶಿಕ್ಷಕ ಶಂಭುಲಿಂಗನಗೌಡ ಪಾಟೀಲ ಮಾತನಾಡಿ, ‘ಸರ್ಕಾರಿ ಶಾಲೆಯಲ್ಲಿ ಅನೇಕ ಸೌಲಭ್ಯಗಳಿವೆ. ವಿದ್ಯಾರ್ಥಿಗಳು ಅವುಗಳನ್ನು ಬಳಸಿಕೊಂಡು ಮುಂದಿನ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು’ ಎಂದರು.
ಮುಖ್ಯಶಿಕ್ಷಕ ಗವಿ ಕುಮಾರ್ ಕಸ್ತೂರಿ, ವೀರಣ್ಣ ಕೋನಸಾಗರ, ಪ್ರಕಾಶ್ ಪಟ್ಟಿ, ಶಿಲ್ಪಾ, ಶಿಕ್ಷಕ ಬಸವರಾಜ, ಸಂಜೀವಕುಮಾರ, ಬಸವರಾಜ ಚಿತ್ತಾಪುರ, ನಾಗರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.