ADVERTISEMENT

ಕುಸಿದ ಬೆಲೆ: ಹೂ ಬೆಳೆಗಾರರು ಕಂಗಾಲು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 14:00 IST
Last Updated 12 ಅಕ್ಟೋಬರ್ 2021, 14:00 IST
ಕುಕನೂರು ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ರೈತರೊಬ್ಬರ ತೋಟದಲ್ಲಿ ಅರಳಿರುವ ಚೆಂಡು ಹೂ
ಕುಕನೂರು ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ರೈತರೊಬ್ಬರ ತೋಟದಲ್ಲಿ ಅರಳಿರುವ ಚೆಂಡು ಹೂ   

ಕುಕನೂರು : ತಾಲ್ಲೂಕಿನ ಹಳ್ಳಿಗಳತ್ತ ಮುಖ ಮಾಡಿದರೆ ಮಲ್ಲಿಗೆ, ಕನಕಾಂಬರ, ಚೆಂಡು ಸೇರಿದಂತೆ ಬಗೆ ಬಗೆಯ ಹೂಗಳು ಹೊಲಗಳಲ್ಲಿ ನಳನಳಿಸುತ್ತಿವೆ. ರೈತರನ್ನು ಮಾತಿಗೆ ಎಳೆದರೆ ‘ಬೆಲೆ ಇಲ್ಲ ಸ್ವಾಮಿ. ಹೂ ಬಿಡಿಸುವ ಕೂಲಿಯೂ ದೊರೆಯುವುದಿಲ್ಲ’ ಎಂದು ಬೇಸರದಿಂದ ತಿಳಿಸಿದರು.

ತಾಲ್ಲೂಕಿನ ಹಲವು ಗ್ರಾಮಗಳ ರಸ್ತೆಯ ಎರಡೂ ಬದಿಯ ಹೊಲಗಳಲ್ಲಿ ಕಾಣುವ ಹೂವಿನ ತೋಟಗಳೇ ಬೆಲೆ ಇಲ್ಲದ್ದನ್ನು ಸಾರಿ ಹೇಳುತ್ತಿವೆ. ಸಮೃದ್ಧವಾಗಿ ಬೆಳೆದಿರುವ ಹೂಗಳನ್ನು ಬೆಲೆ ಇಲ್ಲದ ಕಾರಣ ರೈತರು ಕಟಾವು ಮಾಡುತ್ತಲೇ ಇಲ್ಲ. ಮಾರಾಟಕ್ಕೆ ತಂದ ಹೂಗಳನ್ನು ಮಾರುಕಟ್ಟೆಯಲ್ಲಿಯೇ ಎಸೆಯುತ್ತಿದ್ದಾರೆ.

ತೀವ್ರ ಬೆಲೆ ಕುಸಿತದಿಂದ ಸೇವಂತಿಗೆ ಮತ್ತು ಚೆಂಡು ಹೂ ಬೆಳೆಗಾರರು ತತ್ತರಿಸಿದ್ದಾರೆ. ಒಂದು ಕೆ.ಜಿ ಹೂ ಬೆಲೆ ಕನಿಷ್ಠ ಬೆಲೆಗೆ ಇಳಿದಿದೆ. ದಿನದಿಂದ ದಿನಕ್ಕೆ ಬೆಳೆಗಾರರ ಸಂಖ್ಯೆ ಸಹ ಹೆಚ್ಚುತ್ತಿದೆ. ತಿಂಗಳ ಹಿಂದೆ ಸತತ ಮಳೆಯಿಂದ ಹೂವಿನ ಬೆಳೆಗಳು ನಾನಾ ರೋಗಗಳಿಗೆ ತುತ್ತಾಗಿದ್ದದ್ದವು. ‌ಶ್ರಾವಣ ಮಾಸದಲ್ಲಿ ಸರಣಿ ಹಬ್ಬಗಳ ಕಾರಣ ಹೂವಿಗೆ ಬೆಲೆ ಹೆಚ್ಚಿತು. ಒಂದಿಷ್ಟು ಆದಾಯವನ್ನು ಕಂಡರು.

ADVERTISEMENT

ಶುಭ ಕಾರ್ಯಗಳಿಗೆ ಕಡಿವಾಣ ಬಿದ್ದಿದೆ. ಹೀಗಾಗಿ, ಹೂವಿಗೆ ಬೇಡಿಕೆ ಕುಸಿದಿದೆ. ಮಾರಾಟಕ್ಕೆ ಕೊಂಡೊಯ್ದ ಹೂವನ್ನು ಮಾರುಕಟ್ಟೆಯಲ್ಲಿಯೇ ರೈತರು ಬಿಟ್ಟು ಬರುತ್ತಿದ್ದಾರೆ. ಹೂವಿನ ಮಾರುಕಟ್ಟೆಯಲ್ಲಿ 1 ಕೆ.ಜಿ ಚೆಂಡು ಹೂ, ಸಣ್ಣ ಗುಲಾಬಿ ಬೆಲೆ ₹5, ಸೇವಂತಿಗೆ 1 ಕೆ.ಜಿಗೆ ₹10 ಇದೆ. ಹೂ ಬೆಳೆಯಲು ಹಾಕಿದ ಬಂಡವಾಳವಿರಲಿ, ಹೂ ಕೀಳಲು ಕೊಡಬೇಕಾದ ಕೂಲಿಯ ಹಣ ಕೂಡ ದೊರೆಯುತ್ತಿಲ್ಲ ರೈತರು ಬೇಸರ ವ್ಯಕ್ತಪಡಿಸುತ್ತಾರೆ..

ಕಳೆದ ಎರಡು ವರ್ಷಗಳಿಂದ ಹೂ ಬೆಳೆಗಾರರ ಸ್ಥಿತಿ ಕಷ್ಟಕ್ಕೆ ಸಿಲುಕಿದೆ. ಕೊರೊನಾ ಕಾರಣ ಶುಭ ಸಮಾರಂಭಗಳು ನಡೆಯಲಿಲ್ಲ. ಆಗಲೂ ಹೂ ಮಾರಾಟವಾಗಲಿಲ್ಲ. ಹಬ್ಬಗಳಿಗೂ ಕಡಿವಾಣವಿತ್ತು. ಹೀಗೆ ನಷ್ಟದ ಮೇಲೆ ನಷ್ಟವನ್ನು ಬೆಳೆಗಾರರು ಅನುಭವಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.