ಯಲಬುರ್ಗಾ: ‘ನ್ಯಾಯಾಂಗ ಪ್ರಜಾ ಪ್ರಭುತ್ವದ ಬುನಾದಿ. ವಕೀಲರು ಮತ್ತು ನ್ಯಾಯಾಧೀಶರು ಜನಸಾಮಾನ್ಯರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಮುಖ್ಯ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕೊಪ್ಪಳ ಆಡಳಿತಾತ್ಮಕ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ ಸಲಹೆ ನೀಡಿದರು.
ಪಟ್ಟಣದ ಹಳೆ ಕೋರ್ಟ್ ಆವರಣದಲ್ಲಿ ಶನಿವಾರ ನೂತನ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸಮುದಾಯ ಸಂಘಟನೆಯಲ್ಲಿ ಹೆಚ್ಚು ಗೌರವದ ಸ್ಥಾನಮಾನ ಪಡೆದುಕೊಳ್ಳುವ ವಕೀಲರು ಮತ್ತು ನ್ಯಾಯಾಧೀಶರು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಕಕ್ಷಿದಾರರೇ ಅನ್ನದಾತರು ಎಂಬುದನ್ನು ಅರಿತು ಅವರಿಗೆ ತ್ವರಿತ ನ್ಯಾಯ ದೊರೆಕಿಸಿಕೊಡುವಲ್ಲಿ ತೊಡಗಿಸಿಕೊಳ್ಳಬೇಕು. ಜನ ಸಾಮಾನ್ಯರಿಗೆ ಕಾನೂನಿನ ಕುರಿತು ತಿಳಿವಳಿಕೆ ಮೂಡಿಸುವ ಕೆಲಸ ಮಾಡಬೇಕು ಎಂದರು.
ಸರ್ಕಾರ ಕಾರ್ಯಾಂಗಕ್ಕೆ ಪ್ರೋತ್ಸಾಹ ಮತ್ತು ಅನುದಾನ ನೀಡಿದಷ್ಟು ನ್ಯಾಯಾಂಗಕ್ಕೆ ನೀಡುವುದಿ ಲ್ಲ. ಇದು ಬೇಸರದ ಸಂಗತಿ. ಕೋರ್ಟ್ಗಳಲ್ಲಿ ಕಕ್ಷಿದಾರರು, ಸಿಬ್ಬಂದಿಗೆ ಅನುಕೂಲ ಮಾಡಿಕೊಡ ಲು ಬೇಕಾದ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲು ಹೆಚ್ಚಿನ ಅನುದಾನ ನೀಡದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತದೆ. ಈ ಬಗ್ಗೆ ವಕೀಲರ ಸಂಘ ಜಾಗೃತಗೊಳ್ಳಬೇಕಾಗಿದೆ ಎಂದು ಹೇಳಿದರು.
ಸುಮಾರು ₹15 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನ್ಯಾಯಾಲಯ ಕಟ್ಟಡವನ್ನು ತ್ವರಿತವಾಗಿ ಹಾಗೂ ಗುಣಮಟ್ಟದಲ್ಲಿ ನಿರ್ಮಿಸಿ ಸಾರ್ವಜನಿಕ ಬಳಕೆಗೆ ಅನುವು ಮಾಡಿಕೊಡಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಹಿರಿಯ ಶ್ರೇಣಿ ನ್ಯಾಯಾಧೀಶ ವಿಜಯಕುಮಾರ ಕನ್ನೂರು, ಕರ್ನಾಟಕ ವಕೀಲರ ಪರಿಷತ್ ಸದಸ್ಯ ಅಸಿಫ್ ಅಲಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಬೇಲೇರಿ, ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ಎಸ್.ರೇಖಾ ಮಾತನಾಡಿದರು. ಶ್ರೀ ಕಿರಿಯ ಶ್ರೇಣಿ ನ್ಯಾಯಾಧೀಶೆ ಅಯಿಷಾಬಿ ಪಿ.ಮಜೀದ್, ಹಿರಿಯ ವಕೀಲೆ ಸಂಧ್ಯಾ ಮಾದಿನೂರು, ರಾಜಶೇಖರ ನಿಂಗೋಜಿ. ಎಚ್.ಎಚ್.ಹಿರೇಮನಿ, ಈರಣ್ಣ ಕೊಳೂರು, ಎ.ಎಂ.ಪಾಟೀಲ ಸೇರಿ ಅನೇಕರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.