ಗಂಗಾವತಿ: ಉಪವಿಭಾಗ ಆಸ್ಪತ್ರೆಯ ಎಚ್ಐವಿ ವಿಭಾಗದ (ಎಆರ್ಟಿ) ಕೊಠಡಿಯಲ್ಲಿ ಸೋಮವಾರ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ, ಗಂಗಾವತಿ ರೋಟರಿ ಕ್ಲಬ್ ಆಫ್ ರೈಸ್ ಬೌಲ್ ಹಾಗೂ ಬೇವಿನಹಳ್ಳಿ ಕೆಎಫ್ಐಎನ್ ರೂರಲ್ ಡೆವಲಪ್ ಮೆಂಟ್ ಟ್ರಸ್ಟ್ ಸಹೋಗದಲ್ಲಿ ಕ್ಷಯರೋಗಿಗಳಿಗೆ ಉಚಿತ ಆಹಾರ ಕಿಟ್ ವಿತರಿಸಲಾಯಿತು.
ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಈಶ್ವರ ಸವಡಿ ಮಾತನಾಡಿ, ಜನ್ಮನೀಡಿದ ಮಕ್ಕಳೇ ಪಾಲಕರಿಗೆ ಆಹಾರ ನೀಡಲು ಹಿಂದೇಟು ಹಾಕುತ್ತಿರುವಾಗ, ರೋಟರಿ ಸಂಸ್ಥೆ ಕ್ಷಯರೋಗಿಗಳಿಗೆ ಉಚಿತವಾಗಿ ಆಹಾರದ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯವಾಗಿದೆ. ಇದು ದೈವದತ್ತದ ಕೆಲಸವು ಹೌದು. ಕ್ಷಯ ಸಾಂಕ್ರಾಮಿಕ ರೋಗ. ಜನರು ಇದಕ್ಕೆ ಭಯಪಡುವ ಅಗತ್ಯವಿಲ್ಲ. ಸರಿಯಾದ ಮತ್ತು ನಿರಂತರ ಸಮಯಕ್ಕೆ ಸೂಕ್ತ ಚಿಕಿತ್ಸೆ ಪಡೆದಲ್ಲಿ ರೋಗ ನಿವಾರಣೆ ಆಗುತ್ತದೆ. ರಾಜ್ಯದಲ್ಲಿ ಕ್ಷಯರೋಗ ಹೋಗಲಾಡಿಸಲು, ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಇ ದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಕ್ಷಯರೋಗ ವಿಭಾಗದ ಮಲ್ಲಿಕಾರ್ಜುನ ಮಾತನಾಡಿ, ಕ್ಷಯ ರೋಗ ವಿಭಾಗದಿಂದ ಗಂಗಾವತಿಯಲ್ಲಿ 260 ಕ್ಷಯರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ ಶೇಕಡಾ 80ರಷ್ಟು ಬಡವರಿದ್ದಾರೆ.ಇಂತವರಿಗೆ ಸಂಘ-ಸಂಸ್ಥೆಗಳು ಆಹಾರದ ಕಿಟ್ ವಿತರಿಸಿದರೇ ಚೆನ್ನಾಗಿರುತ್ತದೆ ಎಂದರು. ಗೀತಾ ಚೌದರಿ, ಭಾರತಿ ಆಗಳೂರು, ಬಸಮ್ಮ ಹಣವಾಳ, ಹುಸೇನ ಭಾಷಾ, ರಾಘವೇಂದ್ರ ಜೋಶಿ, ಶ್ರೀನಿವಾಸಲು ಸೇರಿ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.