
ಗಂಗಾವತಿ: ನಗರದ 31ನೇ ವಾರ್ಡ್ ವಿರುಪಾಪುರ ತಾಂಡದಲ್ಲಿನ ನ್ಯಾಯಬೆಲೆ ಅಂಗಡಿಯ ಲಾಗ್ಇನ್ ಬದಲಾವಣೆ ಖಂಡಿಸಿ, ಸ್ಥಳೀಯರು ನಗರದ ತಹಶೀಲ್ದಾರ್ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಸ್ಥಳೀಯ ಮುಖಂಡ ಪಾಂಡುನಾಯ್ಕ್ ಮಾತನಾಡಿ, ‘ಹಲವು ವರ್ಷಗಳಿಂದ ನಮ್ಮ ವಾರ್ಡಿನಲ್ಲಿ ಪ್ರವೀಣ್ ಎನ್ನುವವರು ಸರಸ್ವತಿ ಎಂಬ ಹೆಸರಿನಲ್ಲಿ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದಾರೆ. ಇವರು ಪಡಿತರ ಅಕ್ಕಿ ಎಲ್ಲರಿಗೂ ಸಮಾನವಾಗಿ ವಿತರಣೆ ಮಾಡುತ್ತಿದ್ದರು. ಇದೀಗ ಆಹಾರ ಇಲಾಖೆ ಅಧಿಕಾರಿಗಳು ಅವರ ಲಾಗ್ಇನ್ ಬದಲಾವಣೆ ಮಾಡಿ, ಫಯಾಜ್ ಎನ್ನುವವರಿಗೆ ನೀಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಫಯಾಜ್ ಎಂಬ ನಗರದ 2-3 ವಾರ್ಡ್ಗಳಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ವಿತರಣೆ ಮಾಡುತ್ತಿದ್ದು, ನಮ್ಮ ವಾರ್ಡಿನಲ್ಲಿ ಅಕ್ಕಿ ವಿತರಣೆ ಮಾಡಲು ಸಮಯಕ್ಕೆ ನೀಡುತ್ತಿಲ್ಲ. ತಿಂಗಳ ಮೊದಲ ವಾರದ 2-3 ದಿನ ಮಾತ್ರ ಅಕ್ಕಿ ವಿತರಣೆ ಮಾಡಿ, ನ್ಯಾಯಬೆಲೆ ಅಂಗಡಿ ಬಂದ್ ಮಾಡುತ್ತಿದ್ದಾರೆ. ಪ್ರಶ್ನಿಸಿದರೇ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿತ್ತಾರೆ’ ಎಂದು ಆರೋಪಿಸಿದರು.
ಕೂಡಲೇ ಆಹಾರ ಇಲಾಖೆ ಅಧಿಕಾರಿಗಳು ಫಯಾಜ್ ಅವರಿಗೆ ನೀಡಿದ ಲಾಗ್ಇನ್ ಹಿಂಪಡೆದು, ಮರಳಿ ಪ್ರವೀಣ್ ಅವರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಸ್ಥಳೀಯರಾದ ಬಾಲಾಜಿ, ಶಿವಪ್ಪ, ಶಿವಪ್ಪ ರಾಠೋಡ, ಹನುಮಂತಪ್ಪ, ರವಿಚಂದ್ರ ಸೇರಿ ಮಹಿಳೆಯರು ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.