ಗಂಗಾವತಿ: ತಾಲ್ಲೂಕು 7 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮೀಪದ ಜಂಗಮರ ಕಲ್ಗುಡಿಯಲ್ಲಿ ಭಾನುವಾರ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ಸಮ್ಮೇಳನದ ಅಧ್ಯಕ್ಷರಾದ ಡಾ.ಮುಮ್ತಾಜ್ ಬೇಗಂ ದಂಪತಿಯನ್ನು ಪುಷ್ಪ ಹಾಗೂ ನಾಡ ಧ್ವಜಗಳಿಂದ ಅಲಂಕೃತಗೊಳಿಸಿದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮದ ಆಂಜನೇಯ ದೇಗುಲದ ಸನ್ನಿಧಿಯಿಂದ ಆರಂಭಗೊಂಡ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳ ಮೂಲಕ ಹಾಯ್ದು ಸಮ್ಮೇಳನ ಜರುಗುವ ಶ್ರೀ ಸಿ.ಎಚ್. ಸತ್ಯನಾರಾಯಣರವರ ಬಯಲು ಜಾಗದ ವೇದಿಕೆಗೆ ಆಗಮಿಸಿತು.
ಮೆರವಣಿಗೆ ಉದ್ದಕ್ಕೂ ಕುಂಭ ಮೆರವಣಿಗೆ ವಿವಿಧ ಕಲಾ ತಂಡಗಳಾದ ಡೊಳ್ಳು ಕುಣಿತ, ಕಂಸಾಳೆ, ಜನಪದ ಕಲಾ ತಂಡಗಳ ನೃತ್ಯ ಗಮನ ಸೆಳೆಯಿತು.
ಶಾಲಾ ಮಕ್ಕಳು, ಶಿಕ್ಷಕರು, ಕನ್ನಡ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಕನ್ನಡ ಬಾವುಟ ಹಿಡಿದುಕೊಂಡು ತಾಯಿ ಭುವನೇಶ್ವರಿ ಘೋಷಣೆ ಕೂಗಿ ಸಂಭ್ರಮಿಸಿದರು.
ಇದಕ್ಕೂ ಮೊದಲು ಸಮ್ಮೇಳನದ ವೇದಿಕೆ ಮುಂಭಾಗದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ಡಿವೈಎಸ್ ಪಿ ರುದ್ರೇಶ ಉಜ್ಜನಿಕೊಪ್ಪ ಅವರು ನೆರವೇರಿಸಿದರು. ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಅವರು ಪರಿಷತ್ ಧ್ವಜಾರೋಹಣ, ಕಸಾಪ ತಾಲ್ಲೂಕು ಅಧ್ಯಕ್ಷ ಎಸ್.ಬಿ.ಗೊಂಡಬಾಳ ಕನ್ನಡ ಧ್ವಜಾರೋಹಣವನ್ನು ನೆರವೇರಿಸಿದರು.
ಈ ವೇಳೆ ಜಂಗಮರ ಕಲ್ಗುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಸಣ್ಣ ಯಮನೂರಪ್ಪನಾಯಕ್, ತಾ.ಪಂ ಅಧ್ಯಕ್ಷ ಮಹ್ಮದ್ ರಫಿ, ಎಪಿಎಂಸಿ ಅಧ್ಯಕ್ಷ ಚಂದ್ರೇಗೌಡ, ಕಳಕನಗೌಡ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.