ADVERTISEMENT

ಗಂಗಾವತಿ: ದಸರಾ ಹಬ್ಬಕ್ಕೆ ಖರೀದಿಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 8:19 IST
Last Updated 1 ಅಕ್ಟೋಬರ್ 2025, 8:19 IST
ಗಂಗಾವತಿ ನಗರದಲ್ಲಿ ರೈತರು ಚೆಂಡು ಹೂವು ಮಾರಾಟ ಮಾಡಿದರು
ಗಂಗಾವತಿ ನಗರದಲ್ಲಿ ರೈತರು ಚೆಂಡು ಹೂವು ಮಾರಾಟ ಮಾಡಿದರು   

ಗಂಗಾವತಿ: ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಅಂಗವಾಗಿ ಮಂಗಳವಾರ ಗಂಗಾವತಿ ನಗರದ ಮಾರುಕಟ್ಟೆ, ಪ್ರಮುಖ ವೃತ್ತಗಳಲ್ಲಿ ಮಹಿಳೆಯರು ಕುಟುಂಬ ಸಮೇತ ಹೂವು, ಹಣ್ಣು ಸೇರಿ ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳ ಖರೀದಿ ಜೋರಾಗಿ ನಡೆಸಿದರು.

9 ದಿನಗಳ ನವರಾತ್ರಿ ಆಚರಣೆ ನಂತರದ ಆಯುಧ ಪೂಜೆ, ವಿಜಯದಶಮಿ ಹಬ್ಬದ ಆಚರಣೆಗೆ ಮನೆಯಲ್ಲಿ ಸಾರ್ವಜನಿಕರು ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿಕೊಂಡಿದ್ದು, ಇದರ ಭಾಗವಾಗಿಯೇ ಮಹಿಳೆಯರು ಮನೆಯ ಸಿಂಗಾರಕ್ಕೆ ಬೇಕಾಗುವ ಬಾಳೆದಿಂಡು, ಹೂವು, ಡೆಕೊರೇಷನ್ ವಸ್ತುಗಳನ್ನು ಖರೀದಿಸಿದರು.

ಹಬ್ಬದ ಖರೀದಿ ಬೆಳಿಗ್ಗೆ ಅಷ್ಟೊಂದು ಕಾಣದಿದ್ದರೂ, ಸಂಜೆ ವೇಳೆಗೆ ನಗರದ ಪ್ರಮುಖ ವೃತ್ತದಲ್ಲಿ ಜನ ಸಮೂಹ ಕಂಡು ಬಂದಿತು.

ADVERTISEMENT

ಚೆಂಡು ಹೂವು, ಮಲ್ಲಿಗೆ, ಸೇವಂತಿ ಹೂವು ಬೆಲೆ ತುಸು ಏರಿಕೆಯಲ್ಲೇ ಇತ್ತು. ಸೇಬು, ಮೋಸಂಬಿ, ಸಂತ್ರ, ಪೇರಲ, ದಾಳಿಂಬೆ, ಸಪೋಟಾ ಹಣ್ಣುಗಳು ₹200-₹350 ರವರೆಗೆ ಬೆಲೆಯಿತ್ತು. ಅಡಿಕೆ, ಚೆಂಡು ಹೂವು, ಕಬ್ಬು ಬೆಲೆ ₹50- ₹100 ನಿಗದಿಯಾಗಿದ್ದವು.

ಗಾಂಧಿ ವೃತ್ತ, ಮಹಾವೀರ ವೃತ್ತ, ಗುಂಡಮ್ಮ ಕ್ಯಾಂಪ್ ಸಿಟಿ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾಗುವ ಬಾಳೆದಿಂಡು, ಅಡಿಕೆ, ಕಬ್ಬು, ಬೂದೂಗುಂಬಳ ಕಾಯಿಗಳ ಮಾರಾಟ ನಡೆಯಿತು.

ಆಯುಧಪೂಜೆ ಹಿನ್ನೆಲೆಯಲ್ಲಿ ಜನರು ಹೂಗಳ ಖರೀದಿಯಲ್ಲಿ ತೊಡಗಿರುವುದು ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಮಂಗಳವಾರ ಕಂಡು ಬಂತು

ಇಂದು ಆಯುಧಪೂಜೆ

ಹೇಮಗುಡ್ಡ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಯುಧಪೂಜೆ (ಅ.1)ದಿನದಂದು ಬೆಳಿಗ್ಗೆ ಸಾಮೂಹಿಕ ವಿವಾಹಗಳು ಜರುಗಲಿವೆ. ನಂತರ ಸಂಜೆ ಆನೆಯ ಮೇಲೆ ಅಂಬಾರಿ ಕೂರಿಸಿ ದೇವಿಯ ಉತ್ಸವ ಮೂರ್ತಿಯನ್ನು ಕೂಡಿಸಿ ಮೆರವಣಿಗೆ ಮಾಡಲಾಗುತ್ತದೆ. ಹಾಗೇ ಆನೆಗೊಂದಿ ಸಮೀಪದ ದುರ್ಗಾದೇವಿ ದೇವಸ್ಥಾನದಲ್ಲಿ ವಿಜಯದಶಮಿ ನಿಮಿತ್ತ (ಅ.2) ಬೆಳಿಗ್ಗೆ 10ಕ್ಕೆ 108 ಕುಂಭಗಳೊಂದಿಗೆ ಡೊಳ್ಳು ವೀರಗಾಸೆ ಸೇರಿ ಸಕಲ ವಾದ್ಯಗಳೊಂದಿಗೆ ಆನೆಯ ಅಂಬಾರಿ ಮೇಲೆ ದೇವಿಯ ಮೆರವಣಿಗೆ ನಡೆಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.