ಗಂಗಾವತಿ: ನಗರದ 28ನೇ ವಾರ್ಡ್ನ ಶಿಕ್ಷಕರ ಕಾಲೊನಿಯಲ್ಲಿ ನಗರಸಭೆ ನಿರ್ಮಿಸಿದ ಸರ್ವಪಲ್ಲಿ ರಾಧಾಕೃಷ್ಣ ಉದ್ಯಾನ ಗಮನ ಸೆಳೆಯುತ್ತಿದೆ.
ಉತ್ತಮ ನಿರ್ವಹಣೆಯ ಕಾರಣಕ್ಕೆ ಚಿಣ್ಣರು, ಯುವಕರು, ಮಹಿಳೆಯರು ಹಾಗೂ ವೃದ್ಧರನ್ನು ಆಕರ್ಷಿಸುತ್ತಿದೆ.
ಇದನ್ನು 2019-20ನೇ ಸಾಲಿನ ನಗರಸಭೆಯ ಅಮೃತ ನಗರ ಯೋಜನೆಯಡಿ ₹40 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದೇ ವೇಳೆ ನಗರದಲ್ಲಿ 14 ಉದ್ಯಾನಗಳನ್ನು ನಿರ್ಮಿಸಲಾಗಿದೆ. ಆದರೆ, ಇದು ಮಾತ್ರ ಸುಸ್ಥಿತಿಯಲ್ಲಿದೆ.
ಈ ಉದ್ಯಾನ ಬೆಳಿಗ್ಗೆ 6 ರಿಂದ 9, ಸಂಜೆ 5 ರಿಂದ 8 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಇಲ್ಲಿ ಜಿಮ್ ಪರಿಕರಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಇಲ್ಲಿ ಮಕ್ಕಳಿಗಾಗಿ ಆಟಿಕೆಗಳನ್ನು ಅಳವಡಿಸಲಾಗಿದೆ. ಮಕ್ಕಳು ಇಲ್ಲಿ ಬಂದು ಆಟವಾಡಿ ಖುಷಿಪಡುತ್ತಾರೆ.
ಯೋಗ ಕೇಂದ್ರ, ಆಸನದ ವ್ಯವಸ್ಥೆ: ಇಲ್ಲಿ ಯೋಗ ಕೇಂದ್ರ ತೆರೆಯಲಾಗಿದೆ. ವೃದ್ಧರು, ನಿವಾಸಿಗಳು ಯೋಗ ಮಾಡುತ್ತಾರೆ.
ಇಲ್ಲಿ 6 ಆಸನಗಳನ್ನು ಅಳವಡಿಸಲಾಗಿದೆ.
ಉದ್ಯಾನದ ಸುತ್ತ 12 ವಿದ್ಯುತ್ ಕಂಬಗಳನ್ನು ನಿರ್ಮಿಸಲಾಗಿದೆ. ಉತ್ತಮ ಗುಣಮಟ್ಟದ ದೀಪಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಶೌಚಾಲಯ ನಿರ್ಮಿಸಲಾಗಿದ್ದು, ಅದಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಉದ್ಯಾನದ ನಿರ್ವಹಣೆಗೆ ಪೌರಕಾರ್ಮಿಕರನ್ನು ನೇಮಕ ಮಾಡಲಾಗಿದೆ. ನೀರಿನ ವ್ಯವಸ್ಥೆಗಾಗಿ ಕೊಳವೆಬಾವಿ ಕೊರೆಯಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.