ADVERTISEMENT

ಮೂರ್ತಿ ಸ್ಥಳಾಂತರ: ವಿಡಿಯೊ ವೈರಲ್

ಪಂಪಾ ಸರೋವರ: ಜೂನ್ 3 ರಂದು ಮೂರ್ತಿ ಪ್ರತಿಷ್ಠಾಪನೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 29 ಮೇ 2022, 4:51 IST
Last Updated 29 ಮೇ 2022, 4:51 IST

ಗಂಗಾವತಿ: ತಾಲ್ಲೂಕಿನ ಪಂಪಾ ಸರೋವರದ ವಿಜಯಲಕ್ಷ್ಮಿ ದೇವಸ್ಥಾನದ ಮೂಲ ವಿಗ್ರಹ ಸ್ಥಳಾಂತರದ ವಿಡಿಯೊ ತುಣುಕುಗಳು ತಾಲ್ಲೂಕು ಆಡಳಿತಕ್ಕೆ ಲಭ್ಯವಾಗಿವೆ.

ಸ್ಥಳಾಂತರದ ಕಾರಣಕ್ಕೆ ಮೇ 4ರಂದು ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ದೇವಸ್ಥಾನದ ಒಳಗೆ ವಿಶೇಷ ಪೂಜೆ ಹಾಗೂ ಹೋಮ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ಪೂರ್ಣಕುಂಭದ ಮೂಲಕ ತಂದ ಗಂಗೆಯಿಂದ ವಿಜಯಲಕ್ಷ್ಮಿದೇವಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ನಾಲ್ವರು ಕೆಲಸಗಾರರು, ದೇವಸ್ಥಾನದ ಅರ್ಚಕರು ಕಟ್ಟಿಗೆಯ ಸಹಾಯದಿಂದ ಮೂರ್ತಿ ತೆಗೆದು ಸ್ಥಳಾಂತರ ಮಾಡುತ್ತಿರುವುದು ವಿಡಿಯೊದಲ್ಲಿದೆ.

ADVERTISEMENT

ಜೂ.3ಕ್ಕೆ ಮೂರ್ತಿ ಪ್ರತಿಷ್ಠಾಪನೆ?: ವಿಜಯಲಕ್ಷ್ಮಿದೇವಿ ಮೂರ್ತಿ ಸ್ಥಳಾಂತರ ಮಾಡುವಂತೆ ಹೇಳಿದ ವ್ಯಕ್ತಿಯ ಹೆಸರು ಇನ್ನೂ ತಿಳಿದಿಲ್ಲ. ಗುತ್ತಿಗೆದಾರ ಶ್ರವಣಕುಮಾರ ಸೂಚನೆ ಮೇರೆಗೆಶಾಸ್ತ್ರೋಕ್ತವಾಗಿ ಮೂರ್ತಿ ಸ್ಥಳಾಂತರ ಮಾಡಲಾಗಿದೆ ಎಂದು ಕೆಲಸಗಾರ ಹೇಳುತ್ತಾರೆ.

ಜೂನ್ 3 ರಂದು ಮೂರ್ತಿ ಪ್ರತಿಷ್ಠಾಪನೆ ಆಗಲಿದೆ ಎಂದು ತಿಳಿದುಬಂದಿದೆ.

ರಾಜವಂಶಸ್ಥ ರಾಮದೇವರಾಯ ಭೇಟಿ: ವಿಜಯಲಕ್ಷ್ಮಿ ದೇವಸ್ಥಾನದ ಮೂರ್ತಿ ಸ್ಥಳಾಂತರ ವಿಷಯದ ತಿಳಿದ ಕೂಡಲೇ ವಿಜಯನಗರ ಸಾಮ್ರಾಜ್ಯದ ರಾಜವಂಶಸ್ಥರು ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿನ ಅರ್ಚಕ ಆನಂದ್ ಬಾಬ, ಮ್ಯಾನೇಜರ್ ರಾಘು ಅವರಿಂದ ಘಟನೆ ಕುರಿತು ಮಾಹಿತಿ ಪಡೆದರು.

ಅರ್ಚಕ ಆನಂದ್ ಬಾಬ ಮಾತನಾಡಿ,‘ಮೂರ್ತಿ ಸ್ಥಳಾಂತರಕ್ಕೆ ಸಿದ್ದತೆ ಮಾಡಿಕೊಂಡು ನನ್ನನ್ನು ಕರೆದರು. ನಾನು ಹೋಗುವಷ್ಟರೊಳಗೆ ಮೂರ್ತಿ ಕಿತ್ತಲಾಗಿತ್ತು. ಅದನ್ನು ಸ್ಥಳಾಂತರ ಮಾಡಿ, ಮ್ಯಾನೇಜರ್‌ಗೆ ಮಾಹಿತಿ ಮುಟ್ಟಿಸಿದೆ’ ಎಂದು ತಿಳಿಸಿದರು. ರಾಜವಂಶಸ್ಥ ರಾಮದೇವರಾಯ ಮಾತನಾಡಿ,‘ಮೂ ರ್ತಿ ಪ್ರತಿಷ್ಠಾಪನೆ ಅಂದ್ರೆ ಏನು ಎಂದು ತಿಳಿದುಕೊಂಡಿದ್ದೀರಿ?. ಪಂಪಾಸರೋವರ ರಾಮಾಯಣ ಕಾಲದ ಇತಿಹಾಸ ಹೊಂದಿದೆ. ಹಣ ಇದ್ರೆ ಏನೂ ಬೇಕಾದ್ರೂ ಮಾಡ್ತೀರಾ?. ಯಾರನ್ನು ಕೇಳಿ ಮೂರ್ತಿ ಸ್ಥಳಾಂತರ ಮಾಡಿದಿರಿ. ನಿಮ್ಮ ಕೆಲಸ ದೇವಸ್ಥಾನದ ಜೀರ್ಣೋದ್ಧಾರ. ಅದನ್ನು ಬಿಟ್ಟು ಮೂರ್ತಿ ತೆಗೆದಿದ್ದೀರಿ’ ಎಂದು ಕೆಲಸಗಾರರನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.