ಯಲಬುರ್ಗಾ: ಕಳೆದ ಕೆಲ ದಿನಗಳಿಂದಲೂ ಆಗಾಗ ಸುರಿಯುತ್ತಿರುವ ಮಳೆ ಕೃಷಿ ಚಟುವಟಿಕೆಗಳಿಗೆ ಎಡೆಮಾಡಿಕೊಟ್ಟಿದೆ.
ಕಳೆದ ಮೂರ್ನಾಲ್ಕು ತಿಂಗಳಿಂದಲೂ ಕೋವಿಡ್ ಅಲೆಯಿಂದ ಮನೆ ಸೇರಿದ್ದ ರೈತರು ಮತ್ತೆ ತಮ್ಮ ಕಾಯಕದತ್ತ ಮುಖ ಮಾಡಿದ್ದಾರೆ. ಬಿತ್ತನೆಗೆ ಹದವಾಗಿರುವ ಭೂಮಿಯ ಒಡಲಿಗೆ ಬೀಜ ಹಾಕಲು ಉತ್ಸುಕರಾಗಿದ್ದಾರೆ.
ಕೋವಿಡ್ ಆತಂಕ ಮರೆತು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿರುವುದು ಕಂಡುಬರುತ್ತಿದೆ.
ಎರಡು ವಾರಗಳ ಹಿಂದೆಯೇ ತಾಲ್ಲೂಕಿನ ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಮಾರಾಟ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.
ರೈತರು ಬಿತ್ತನೆ ಬೀಜ ಖರೀದಿಯಲ್ಲಿ ನಿರತರಾಗಿದ್ದು, ರೈತ ಸಂಪರ್ಕ ಕೇಂದ್ರಗಳ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಿರುವುದು ಸಾಮಾನ್ಯವಾಗಿ ಎದ್ದುಕಾಣುತ್ತಿದೆ.
ಉತ್ತಮ ಮಳೆ ಸುರಿದಿದ್ದರಿಂದ ಈ ವರ್ಷದ ಮುಂಗಾರು ಹಂಗಾಮು ರೈತರಲ್ಲಿ ಹರ್ಷವನ್ನು ಮೂಡಿಸಿದೆ. ಕೋವಿಡ್ ಸಂಕಷ್ಟದ ನಡುವೆಯೂ ತುಸು ನೆಮ್ಮದಿ ದಕ್ಕಿದೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಸರು ಬೀಜ ಹೆಚ್ಚು ಮಾರಾಟವಾಗಿದ್ದು, ಕಂಡುಬಂದಿದೆ. ಉಳಿದಂತೆ ಶೇಂಗಾ, ತೊಗರಿ, ಎಳ್ಳು, ಜೋಳ, ಮೆಕ್ಕೆಜೋಳ, ಸಜ್ಜೆ, ನವಣಿ ವಿವಿಧ ಬೀಜಗಳ ಬಿತ್ತನೆಗೆ ರೈತರು ಮುಂದಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.