ಯಲಬುರ್ಗಾ: ‘ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಹೆಚ್ಚಾಗುತ್ತಿರುವ ಕಾರಣ ಮಕ್ಕಳ ಶೈಕ್ಷಣಿಕ ಸ್ಥಿತಿಗತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಸರಿಯಾಗಿ ವೇತನ ನೀಡದೆ ಅತಿಥಿ ಶಿಕ್ಷಕರನ್ನು ದುಡಿಸಿಕೊಳ್ಳುತ್ತಿದ್ದಾರೆ’ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ ಆರೋಪಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಯಂ ಶಿಕ್ಷಕರಿಲ್ಲದೆ ಬಹುತೇಕ ಶಾಲೆಗಳಲ್ಲಿ ಅತಿಥಿ ಶಿಕ್ಷಕರೆ ಕಾರ್ಯನಿರ್ವಹಿಸಬೇಕಾಗಿದೆ. ಈ ಅವಕಾಶವನ್ನು ಕೆಲ ಪೂರ್ಣಾವಾಧಿ ಶಿಕ್ಷಕರು ದುರ್ಬಳಕೆ ಮಾಡಿಕೊಂಡು ಪೂರ್ಣ ತರಗತಿಗಳನ್ನು ಅತಿಥಿ ಶಿಕ್ಷಕರ ಮೇಲೆ ಹೊರೆ ಹಾಕಿ ಸಭೆ ಸಮಾರಂಭಗಳಲ್ಲಿ ತಿರುಗಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಕೆಲವೆಡೆ ಶಿಕ್ಷಕರಿಲ್ಲದೇ ಎಲ್ಲವನ್ನು ಅತಿಥಿ ಶಿಕ್ಷಕರೆ ನಿರ್ವಹಿಸುತ್ತಿರುವುದರಿಂದ ಕೆಲವೊಂದು ನಿರ್ಣಯ ಕೈಗೊಳ್ಳಲು ಸಾಧ್ಯವಾಗದ ಅನಿವಾರ್ಯತೆ ಎದುರಾಗುತ್ತಿದೆ. ಈ ಬಗ್ಗೆ ಸ್ಥಳೀಯ ಶಾಸಕರು ಯಾವುದೇ ಕಾಳಜಿ ತೋರುತ್ತಿಲ್ಲ’ ಎಂದು ಟೀಕಿಸಿದರು.
ಶಾಲೆ ಕೋಠಡಿಗಳ ನಿರ್ಮಾಣ, ಪ್ರೌಢಶಾಲೆ, ಕಾಲೇಜು ಕಟ್ಟಡ ಇದ್ದರೆ ಸಾಲದು ಪಾಠ ಮಾಡಲು ಶಿಕ್ಷಕರನ್ನು ಭರ್ತಿ ಮಾಡಬೇಕು ಎನ್ನುವ ಕನಿಷ್ಟ ಅರಿವು ಶಾಸಕರಿಗೆ ಇಲ್ಲದಾಗಿದೆ ಎಂದರು.
ವೇತನ ಪಾವತಿಗೆ ಒತ್ತಾಯ: ‘ಕುಕನೂರು ಮತ್ತು ಯಲಬುರ್ಗಾ ಅವಳಿ ತಾಲ್ಲೂಕಿನ 16 ಮೇಲ್ದರ್ಜೆಗೇರಿದ ಪ್ರೌಢಶಾಲೆಗಳ 66 ಅತಿಥಿ ಶಿಕ್ಷಕರಿಗೆ ಕಳೆದ 9 ತಿಂಗಳಿಂದ ಗೌರವಧನ ನೀಡದೇ ನಿರ್ಲಕ್ಷ್ಯ ತೋರಿದ ಕಾಂಗ್ರೆಸ್ ಸರ್ಕಾರದ ನಡೆದ ತೀರಾ ನಾಚಿಕೆಗೇಡಿನ ಸಂಗತಿಯಾಗಿದೆ’.
‘ಕ್ಷೇತ್ರದ ಶಾಸಕರು ಸಿಎಂ ಅವರ ಆರ್ಥಿಕ ಸಲಹೆಗಾರರಾಗಿ ಕಾರಿನಲ್ಲಿ ಬಂದು ಹೋಗುವುದು ಸಾಧನೆಯಲ್ಲ. ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸುವುದು ಹಾಗೂ ಅತಿಥಿ ಶಿಕ್ಷಕರಿಗೆ ಬಾಕಿ ವೇತನ ಕೊಡಿಸುವಲ್ಲಿ ಕಾಳಜಿ ತೋರುವುದು ಮುಖ್ಯ’ ಎಂದು ಮುಖಂಡ ಶರಣಪ್ಪ ರಾಂಪೂರ, ತಾಲ್ಲೂಕು ಅಧ್ಯಕ್ಷ ಬಸವರಾಜ ಗುಳಗುಳಿ, ಮುಖಂಡ ಪಿಡ್ಡನಗೌಡ ಗಾಣದಾಳ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.