ADVERTISEMENT

ಹಲಗೇರಿ ಸರ್ಕಾರಿ ಶಾಲೆಗೆ ನಿಂಗಪ್ಪ ಉಳ್ಳಾಗಡ್ಡಿ ಭೂಮಿ ದಾನ

ರಾಜ್ಯಪಾಲರ ಹೆಸರಿಗೆ 2 ಎಕರೆ ಭೂಮಿ ದಾನ-ಗ್ರಾಮಸ್ಥರಿಂದ ಸನ್ಮಾನ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 6:04 IST
Last Updated 1 ಮಾರ್ಚ್ 2026, 6:04 IST
ಅಳವಂಡಿ ಸಮೀಪದ ಹಲಗೇರಿ ಗ್ರಾಮದ ಸರ್ಕಾರಿ ಶಾಲೆಗೆ ಭೂದಾನ ಮಾಡಿದ ನಿಂಗಪ್ಪ ಉಳ್ಳಾಗಡ್ಡಿ ಅವರನ್ನು ಶಾಲಾ ಶಿಕ್ಷಕರು ಮತ್ತು ಗ್ರಾಮಸ್ಥರು ಸನ್ಮಾನಿಸಿದರು.
ಅಳವಂಡಿ ಸಮೀಪದ ಹಲಗೇರಿ ಗ್ರಾಮದ ಸರ್ಕಾರಿ ಶಾಲೆಗೆ ಭೂದಾನ ಮಾಡಿದ ನಿಂಗಪ್ಪ ಉಳ್ಳಾಗಡ್ಡಿ ಅವರನ್ನು ಶಾಲಾ ಶಿಕ್ಷಕರು ಮತ್ತು ಗ್ರಾಮಸ್ಥರು ಸನ್ಮಾನಿಸಿದರು.   

ಅಳವಂಡಿ: ವಲಯದ ವ್ಯಾಪ್ತಿಯ ಹಲಗೇರಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮದ ನಿವಾಸಿ ನಿಂಗಪ್ಪ ಉಳ್ಳಾಗಡ್ಡಿ ವೀರಾಪುರ ತಮ್ಮ 2 ಎಕರೆ ಭೂಮಿಯನ್ನು ದಾನ ಮಾಡಿದ್ದು, ಅವರ ಸೇವಾಭಾವ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ವೀರಾಪುರ ಗ್ರಾಮದ ನಿವಾಸಿ ನಿಂಗಪ್ಪ ಉಳ್ಳಾಗಡ್ಡಿ ಹಲಗೇರಿಯ ಅವರು, ತಮ್ಮ ಸ್ವಂತ ಜಮೀನಿನ ಒಂದು ಭಾಗವನ್ನು ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ವಿಸ್ತರಣೆಗೆ ಉಚಿತವಾಗಿ ದಾನ ಮಾಡಿ ಹಸ್ತಾಂತರಿಸಿದರು.

ಮುಖ್ಯಶಿಕ್ಷಕ ಶಂಭುಲಿಂಗನಗೌಡ ಪಾಟೀಲ ಮಾತನಾಡಿ, ‘ಶಿಕ್ಷಣ ಕ್ಷೇತ್ರಕ್ಕೆ ಇಂತಹ ದಾನಗಳು ದೊಡ್ಡ ಪ್ರೋತ್ಸಾಹ, ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಇದು ಸಹಾಯಕವಾಗುತ್ತದೆ. ಈ ಭೂಮಿ ದಾನದ ಮೂಲಕ ಹೊಸ ತರಗತಿ ಕೊಠಡಿಗಳು, ಗ್ರಂಥಾಲಯ ಹಾಗೂ ಆಟದ ಮೈದಾನ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುವುದು. ಮುಂದಿನ ದಿನಗಳಲ್ಲಿ ನಮ್ಮ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವಂತೆ ಒತ್ತಾಯಿಸಿ, ಗ್ರಾಮದಲ್ಲಿ ಶಿಕ್ಷಣದ ಬೆಳವಣಿಗೆಗೆ ಇದು ಮಹತ್ವದ ಹೆಜ್ಜೆಯಾಗಿದೆ. ಗ್ರಾಮದ ಶೈಕ್ಷಣಿಕ ಸಹಕಾರಕ್ಕೆ ಇಂತಹ ಇನ್ನಷ್ಟು ದಾನಿಗಳು ಕೈಜೋಡಿಸಿ, ಸರ್ಕಾರಿ ಶಾಲೆಯ ಬಗ್ಗೆ ಕಾಳಜಿ ವಹಿಸಿ ಬಡವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ಶಿಕ್ಷಕರಾದ ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದು ಹೇಳಿದರು.

ADVERTISEMENT

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಹಳೆ ವಿದ್ಯಾರ್ಥಿ ಶರಣಬಸನಗೌಡ ಪಾಟೀಲ ಮಾತನಾಡಿ, ‘ನಾವು ಸೇರಿದಂತೆ ಅನೇಕರು ಈ ಶಾಲೆಯಲ್ಲಿ ಕಲಿತ ದಿನಗಳು ಇಂದಿಗೂ ನೆನಪು ಮಾಸಿಲ್ಲ. ಹಿರಿಯರಾದ ನಿಂಗಪ್ಪ ಉಳ್ಳಾಗಡ್ಡಿ ಅವರು ಇಂದು ರಾಜ್ಯಪಾಲರ ಹೆಸರಿಗೆ 2 ಎಕರೆ ಭೂಮಿಯನ್ನು ಉಚಿತವಾಗಿ ಹಸ್ತಾಂತರಿಸಿ, ಕೊಠಡಿ ಸೇರಿದಂತೆ ಆಟದ ಮೈದಾನ ನಿರ್ಮಾಣ ಮಾಡಲು ಸಹಕಾರಿಯಾಗಲಿದೆ’ ಎಂದು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಓಜನಳ್ಳಿ, ಉಪಾಧ್ಯಕ್ಷ, ಸದಸ್ಯರು, ಗ್ರಾಮಸ್ಥರು ಸೇರಿದಂತೆ ಸಿಬ್ಬಂದಿ ಉಳ್ಳಾಗಡ್ಡಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.