ಅಂಜನಾದ್ರಿಯಲ್ಲಿ ದರ್ಶನ ಪಡೆಯಲು ಸರತಿಯಲ್ಲಿ ಬಂದ ಹನುಮ ಮಾಲಧಾರಿಗಳು
ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಅಂಜನಾದ್ರಿ (ಕೊಪ್ಪಳ ಜಿಲ್ಲೆ): ಚಳಿಯ ನಡುವೆಯೂ ಸೂರ್ಯೋದಯಕ್ಕೂ ಮೊದಲೇ ಬರಿ ಮೈಯಲ್ಲಿ ಬಂದ ಸಾವಿರಾರು ಹನುಮ ಮಾಲೆ ಧರಿಸಿದ್ದ ಭಕ್ತರು ಜಿಲ್ಲೆಯ ಅಂಜನಾದ್ರಿಯಲ್ಲಿ ಮಾಲೆ ವಿಸರ್ಜನೆ ಮಾಡಿದರು.
ಕೊಪ್ಪಳ ಹಾಗೂ ನೆರೆ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ಬಂದು ಶುಕ್ರವಾರ ಬೆಳಗಿನ ಜಾವದಿಂದಲೇ ಮಾಲೆ ವಿಸರ್ಜನೆ ಆರಂಭಿಸಿದ್ದಾರೆ. ಲಕ್ಷಾಂತರ ಭಕ್ತರು ಸೇರಿರುವ ಮಾಲೆ ವಿಸರ್ಜನೆಯಲ್ಲಿ ಕಲಬುರಗಿ, ಬೀದರ್, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಇಲ್ಲಿಗೆ ಬಂದಿದ್ದಾರೆ.
ಹಲವರು ವಾಹನಗಳಲ್ಲಿ ಬಂದರೆ, ಇನ್ನು ಕೆಲವರು ಪಾದಯಾತ್ರೆಯ ಮೂಲಕ ಅಂಜನಾದ್ರಿಗೆ ಬಂದು ಪೂಜಾ ಕೈಂಕರ್ಯ ಪೂರ್ಣಗೊಳಿಸಿ ಮಾಲೆ ವಿಸರ್ಜಿಸಿದರು. ಐದು, ಏಳು ಹಾಗೂ ಒಂಬತ್ತು ದಿನ ಮೈಮೇಲೆ ಕೇಸರಿ ಬಟ್ಟೆ ಹಾಗೂ ಕೊರಳಲ್ಲಿ ತುಳಸಿ ಮಾಲೆ ಧರಿಸಿದ್ದ ಮಾಲಾಧಾರಿಗಳು ಆಂಜನೇಯನ ದರ್ಶನ ಪಡೆದು ಬಳಿಕ ಅಲ್ಲಿಯೇ ಮಾಲೆ ವಿಸರ್ಜಿಸಿ ತಮ್ಮ ಪೂಜೆ ಮುಗಿಸಿದರು.
ತುಂಗಭದ್ರಾ ನದಿಯ ಸಮೀಪದಲ್ಲಿಯೇ ಅಂಜನಾದ್ರಿ ಬೆಟ್ಟ ಇರುವುದರಿಂದ ಸಾವಿರಾರು ಭಕ್ತರು ಗುರುವಾರ ರಾತ್ರಿಯೇ ಇಲ್ಲಿಗೆ ಬಂದು ನದಿಯಲ್ಲಿ ಸ್ನಾನ ಮಾಡಿ ಸೂರ್ಯೋದಯಕ್ಕೂ ಮೊದಲು ಆಂಜನೇಯನ ಮೂರ್ತಿಯ ದರ್ಶನ ಪಡೆದರು. ಬಳಿಕ ಬೆಟ್ಟದ ಮೇಲಿಂದ ಸೊಗಸಾಗಿ ಕಾಣುವ ಸೂರ್ಯೋದಯದ ಸೊಬಗನ್ನೂ ಕಣ್ತುಂಬಿಕೊಂಡರು.
ದೂರದ ಊರುಗಳಿಂದ ಬಂದ ಭಕ್ತರು ಕೊಪ್ಪಳದ ಗವಿಮಠ' ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಗಳಲ್ಲಿ ವಾಸ್ತವ್ಯ ಹೂಡಿದರು. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ಅಂಜನಾದ್ರಿ ದೇವಸ್ಥಾನ ಹಾಗೂ ಜಿಲ್ಲಾಡಳಿತದ ವತಿಯಿಂದಲೇ ಬಂದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಮಧ್ಯರಾತ್ರಿ 3 ಗಂಟೆಯಿಂದಲೇ ಬೆಟ್ಟದ ಮೇಲೆ ಭಕ್ತರನ್ನು ಬಿಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.