
ಕನಕಗಿರಿ: ಪಟ್ಟಣದ ಸೇರಿದಂತೆ ತಾಲ್ಲೂಕಿನ ವಿವಿಧೆಡೆಯ ಹನುಮಂತ ದೇಗುಲಗಳಲ್ಲಿ ಬುಧವಾರ ಶ್ರದ್ಧಾ-ಭಕ್ತಿಯಿಂದ ಹನುಮ ಜಯಂತಿಯನ್ನು ಆಚರಿಸಲಾಯಿತು.
ಇಲ್ಲಿನ ಕನಕಾಚಲಪತಿ ದೇವಸ್ಥಾನ ಪಕ್ಕದಲ್ಲಿರುವ ಸಂಜೀವಮೂರ್ತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಬೆಳಿಗ್ಗೆ ವಾಯುಪುತ್ರನಿಗೆ ಮಹಾಭಿಷೇಕ, ರುದ್ರಾಭಿಷೇಕ ನೆರವೇರಿಸಲಾಯಿತು.
ಲೆಕ್ಕಿ ಪತ್ರಿಯ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು. ತುಳಸಿ ಅರ್ಚನೆ ಹಾಗೂ ಮಹಾ ಮಂಗಳಾರತಿ ಮೂಲಕ ನಾಡಿನ ಸಮೃದ್ಧಿಗೆ ಪ್ರಾರ್ಥಿಸಲಾಯಿತು. ಭಕ್ತರು ದೇವಸ್ಥಾನಕ್ಕೆ ತೆರಳಿ ಹೂ-ಹಣ್ಣು, ಕಾಯಿ ಅರ್ಪಿಸಿದರು. ಮಹಿಳೆಯರು ಬಾಲ ಹನುಮನನ್ನು ಪೂಜಿಸಿ ಸಂಭ್ರಮಿಸಿದರು.
ಈ ವೇಳೆ ಅರ್ಚಕ ಶೇಖಪ್ಪ ಪೂಜಾರ ಮಾತನಾಡಿ, ‘ಪ್ರತಿ ವರ್ಷ ವಿಶಿಷ್ಟವಾಗಿ ಅಲಂಕರಿಸಿ ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಹನುಮನಿಗೆ ಹಣ್ಣುಗಳೆಂದರೆ, ಎಲ್ಲಿಲ್ಲದ ಪ್ರೀತಿ. ಹೀಗಾಗಿ ಒಣ ಹಣ್ಣುಗಳಿಂದ ಸಿಂಗರಿಸಿ ಹನುಮನಿಗೆ ಪೂಜೆ ಸಲ್ಲಿಸಲಾಗಿದೆ’ ಎಂದರು.
‘ಏಲಕ್ಕಿ, ಲವಂಗ ಮತ್ತು ಅಂಜೂರು ಹಣ್ಣುಗಳಿಂದ ಸಿಂಗರಿಸಲಾಗಿದೆ. ಈ ರೀತಿಯ ಸಿಂಗರಿಸುವುದರಿಂದ ಹನುಮ ಭಕ್ತರಿಗೆ ಇಷ್ಟಾರ್ಥ ಕರುಣಿಸುತ್ತಾನೆ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ’ ಎಂದು ವಿವರಿಸಿದರು.
ಸಮೀಪದ ಕರಡಿಗುಡ್ಡದ ಹನುಮಂತ ದೇವಸ್ಥಾನದಲ್ಲಿ ಹನುಮ ಮಾಲಾಧಾರಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.