ಮುನಿರಾಬಾದ್: ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಹುಣ್ಣಿಮೆಯ ಅಂಗವಾಗಿ ಮಂಗಳವಾರ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಕಾಲ್ತುಳಿತ, ತಳ್ಳಾಟ, ನೂಕಾಟ ನಡೆದು ಹಲವಾರು ಭಕ್ತರು ಪರದಾಡಿದರು. ಘಟನೆ ಸಂಬಂಧ ಗ್ರಾಮದ ಕೆಲ ಮುಖಂಡರು ಮಂಗಳವಾರ ಜಿಲ್ಲಾಧಿಕಾರಿಗೆ ದೂರು ನೀಡಿ, ಪರಿಸ್ಥಿತಿಯ ನಿರ್ವಹಣೆಗೆ ಮನವಿ ಮಾಡಿದ್ದರು.
ಜಿಲ್ಲಾಧಿಕಾರಿಯ ಸೂಚನೆ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್. ಅರಸಿದ್ದಿ ಅವರು ಸ್ವತಃ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಹುಲಿಗಿಗೆ ಬಂದು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಶ್ರಮಿಸಿದರು.
ಸಂಸದರಿಂದ ಸಭೆ: ಮಂಗಳವಾರದ ಘಟನೆಯ ಬಗ್ಗೆ ಚರ್ಚಿಸಲು, ಸಂಸದ ರಾಜಶೇಖರ ಹಿಟ್ನಾಳ ಅವರು ದೇವಸ್ಥಾನ ಕಾರ್ಯಾಲಯದ ಸಭಾಂಗಣದಲ್ಲಿ ಅಧಿಕಾರಿಗಳು, ಗ್ರಾಮದ ಪ್ರಮುಖರು ಮತ್ತು ಸಂಘ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್. ಪ್ರಕಾಶ್ ರಾವ್ ಅವರನ್ನು ತರಾಟೆಗೆ ತೆಗೆದುಕೊಂಡು, ಸ್ಥಳೀಯ ಆಡಳಿತ ಗ್ರಾಮ ಪಂಚಾಯಿತಿ ಮತ್ತು ಗ್ರಾಮದ ಸಂಘ ಸಂಸ್ಥೆಗಳು, ಸ್ವಯಂಸೇವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲು ಸೂಚಿಸಿದರು.
ಗ್ರಾಮ ಪಂಚಾಯಿತಿ ಅಸಹಕಾರ: ದೇವಸ್ಥಾನದಿಂದ ನಮಗೆ ಯಾವುದೇ ಲಾಭ ಇಲ್ಲ ಎಂಬ ಧೋರಣೆ ಹೊಂದಿರುವ ಗ್ರಾಮ ಪಂಚಾಯಿತಿ ಮೊದಲಿನಿಂದಲೂ ದೇವಸ್ಥಾನದ ಕಾರ್ಯಗಳಿಂದ ದೂರವೇ ಉಳಿದಿದೆ ಎಂದು ಗ್ರಾಮಸ್ಥರೊಬ್ಬರು ಮಾಹಿತಿ ನೀಡಿದರು.
ಸಭೆಯಲ್ಲಿ ಪ್ರಾಧಿಕಾರದ ಸದಸ್ಯರು, ಗ್ರಾಮದ ಸ್ವಯಂಸೇವಕರು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಪಿಎಸ್ಐ ಎಚ್.ಸುನೀಲ್ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.
ಆಟೋ ಮೂಲಕ ಪ್ರಚಾರ: ಮಂಗಳವಾರದ ಘಟನೆಯ ನಂತರ ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆಯ ನೆರವಿನೊಂದಿಗೆ ಬುಧವಾರ ಆಟೋದಲ್ಲಿ ಧ್ವನಿವರ್ಧಕದ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು. ಮುಖ್ಯರಸ್ತೆ ಮತ್ತು ಚರಂಡಿಯಿಂದ ಕನಿಷ್ಠ ಮೂರು ಅಡಿ ಹಿಂದಕ್ಕೆ ನಿಮ್ಮ ಅಂಗಡಿ ವ್ಯಾಪಾರ ಇರಬೇಕು. ರಸ್ತೆ ಮಧ್ಯೆ ವ್ಯಾಪಾರ, ವ್ಯವಹಾರ ಮಾಡುವಂತಿಲ್ಲ. ನಿಯಮ ಮೀರಿದ ವರ್ತಕರ ಸಾಮಾನು, ಸರಂಜಾಮಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂಬ ಎಚ್ಚರಿಕೆ ಸಂದೇಶ ನೀಡಿದರು. ದೇವಸ್ಥಾನ ಸಿಬ್ಬಂದಿ ದೇವಸ್ಥಾನದ ರಾಜ ಬೀದಿಯಲ್ಲಿ ವ್ಯಾಪಾರಿಗಳನ್ನು ಹಿಂದೆ ಸರಿಸುವ ಪ್ರಯತ್ನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.