ADVERTISEMENT

ಅಳವಂಡಿ | ಜಿಲ್ಲಾಧಿಕಾರಿ ಜನಸ್ಪಂದನ ಕಾರ್ಯಕ್ರಮ; ಸಮಸ್ಯೆಗಳಿಗೆ ಸಿಗುವುದೇ ಪರಿಹಾರ?

ಜುನಸಾಬ ವಡ್ಡಟ್ಟಿ
Published 27 ಆಗಸ್ಟ್ 2024, 5:02 IST
Last Updated 27 ಆಗಸ್ಟ್ 2024, 5:02 IST
ಅಳವಂಡಿಯ ಸಿದ್ದೇಶ್ವರ ನಗರದಲ್ಲಿ ರಸ್ತೆಯ ಮೇಲೆ ಕೊಳಚೆ ನೀರು ನಿಂತಿರುವುದು
ಅಳವಂಡಿಯ ಸಿದ್ದೇಶ್ವರ ನಗರದಲ್ಲಿ ರಸ್ತೆಯ ಮೇಲೆ ಕೊಳಚೆ ನೀರು ನಿಂತಿರುವುದು   

ಅಳವಂಡಿ: ನೀರು, ರಸ್ತೆ, ಚರಂಡಿ, ಬಸ್‌ ಸೌಲಭ್ಯ, ಶೌಚಾಲಯ, ಶಾಲಾ ಕಟ್ಟಡದಂತಹ ಮೂಲಸೌಕರ್ಯಗಳ ಸಮಸ್ಯೆಯಿಂದ ಹೋಬಳಿ ವ್ಯಾಪ್ತಿಗಳ ಗ್ರಾಮಗಳು ಬಳಲುತ್ತಿವೆ.

ಹೋಬಳಿ ವ್ಯಾಪ್ತಿಯ ಸರಣಿ ಸಮಸ್ಯೆಗಳಿಗೆ ಅಳವಂಡಿಯ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಧಿಕಾರಿ ಕಚೇರಿಯಿಂದ ಆಯೋಜಿಸಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಪರಿಹಾರ ಸಿಗಲಿದೆಯೇ ಎಂಬ ಕಾತರ ಸಾರ್ವಜನಿಕರಲ್ಲಿ ಮನೆ ಮಾಡಿದೆ.

ಹಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿದ್ದು, ಶುದ್ಧ ಜೀವಜಲಕ್ಕಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಕೆಲವು  ಕೆಲವು ಶಾಲಾ ಕೊಠಡಿಗಳ ಚಾವಣಿ ಹಾಳಾಗಿದೆ. ಮತ್ತೆ ಕೆಲವೆಡೆ ಶೌಚಾಲಯ ಇಲ್ಲದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹೋಬಳಿ ವಲಯದ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನಗಳ ಸವಾರರು ನಿತ್ಯ ಪರದಾಡುವ ಸ್ಥಿತಿಯಿದೆ.

ADVERTISEMENT

ಅಳವಂಡಿಯು ಕೊಪ್ಪಳ ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರ. ಇಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರ ಕೊರತೆ ಕಾಡುತ್ತಿದೆ. ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಇನ್ನೂ ಉದ್ಘಾಟನೆಯಾಗಿಲ್ಲ. ಗ್ರಾಮದ ನಾಡ ಕಚೇರಿ ಚಾವಣಿ ಹಾಳಾಗಿದ್ದು, ದುರಸ್ತಿಗೆ ಕಾದಿದೆ. ನಾಡ ಕಚೇರಿ ಆವರಣದಲ್ಲಿ ಕುಡಿಯುವ ನೀರು–ನೆರಳಿನ ವ್ಯವಸ್ಥೆ ಇಲ್ಲ. ಜನರು ಅರ್ಜಿ ಸಲ್ಲಿಸಲು ಬಿಸಿಲಿನಲ್ಲೇ ಸಾಲುಗಟ್ಟುವ ಸ್ಥಿತಿಯಿದೆ.  ಮತ್ತೊಂದೆಡೆ ಹಲವು ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಅರೆಬರೆಯಾಗಿ ಸಾಗಿದ್ದು, ಕಳಪೆಗುಣಮಟ್ಟದಿಂದ ಕೂಡಿದೆ ಎಂಬ ಆರೋಪಗಳೂ ಕೇಳಿ ಬಂದಿವೆ.

ಹೈದರನಗರ ಗ್ರಾಮದಲ್ಲಿ ರಸ್ತೆಗಳು ಹದೆಗೆಟ್ಟಿವೆ. ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೆಕೆಆರ್‌ಟಿಸಿ ಬಸ್ ತೆಗ್ಗುಗಳಲ್ಲಿ ಸಿಲುಕಿ ಪರದಾಡಿದ ಘಟನೆ ನಡೆದಿವೆ.
-ವಿರೂಪಾಕ್ಷಿ ಬಡಿಗೇರ, ಹೈದರನಗರ ಗ್ರಾಮಸ್ಥ
ಬೋಚನಹಳ್ಳಿ ಗ್ರಾಮದಲ್ಲಿ ಸ್ವಚ್ಛತೆಯೇ ಇಲ್ಲ. ರೋಗಗಳ ಭೀತಿ ಎದುರಾಗಿದೆ. ಸಿ.ಸಿ.ರಸ್ತೆ ಶುದ್ಧ ಕುಡಿಯುವ ನೀರಿನ ಕೊರತೆ ಕಾಡುತ್ತಿದೆ
-ಬಸವರಾಜ ಗುಡ್ಲಾನೂರ, ಬೋಚನಹಳ್ಳಿ ಗ್ರಾಮಸ್ಥ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಕೊರತೆಯಿದೆ. ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿ ಅನುದಾನ ಬಂದರೂ ಕಟ್ಟಡ ಕಾಮಗಾರಿ ಶುರುವಾಗಿಲ್ಲ
-ಶರಣಪ್ಪ ಜಡಿ, ಗ್ರಾಮಸ್ಥ ಅಳವಂಡಿ
ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ - ಮುಂಡರಗಿ ರಸ್ತೆ ಹದೆಗೆಟ್ಟಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.