ಕೊಪ್ಪಳ: ಸ್ವಾತಂತ್ರ್ಯ ದಂಗೆಯೊಂದರ ನೆನಪಿಗಾಗಿ ಪ್ರಮುಖ ರಸ್ತೆಯ ಮಧ್ಯಭಾಗದಲ್ಲಿ ನಿರ್ಮಿಸಲಾಗಿರುವ ಸ್ಮಾರಕ ಅಶೋಕ ಸರ್ಕಲ್ಗೆ ಆಧುನೀಕರಣ ಸ್ಪರ್ಶ ನೀಡಲು ಕೊನೆಗೂ ಕಾಲ ಕೂಡಿ ಬಂದಿದೆ.
ಸಾರನಾಥದ ನಾಲ್ಕುಮುಖದ ಸಿಂಹದ ಆಕರ್ಷಕ ಕೆತ್ತನೆಯೊಂದಿಗೆ ಇರುವ ಈ ಸರ್ಕಲ್ 1957ರಲ್ಲಿ ನಿರ್ಮಿಸಲಾಗಿದೆ. ಕೆಲ ತಿಂಗಳುಗಳ ಹಿಂದೆ ಸರ್ಕಲ್ಗೆ ವಾಹನ ಡಿಕ್ಕಿ ಹೊಡೆದಿದ್ದರಿಂದ ಐತಿಹಾಸಿಕವಾದ ಈ ಸ್ಮಾರಕ ಉಳಿಯಬೇಕು, ಧಕ್ಕೆಯಾಗದಂತೆ ಕ್ರಮ ವಹಿಸಬೇಕು ಎಂದು ಇಲ್ಲಿನ ಹೋರಾಟಗಾರರು ಹಾಗೂ ಇತಿಹಾಸ ಪ್ರೇಮಿಗಳು ಆಗ್ರಹಿಸಿದ್ದರು. ಆದ್ದರಿಂದ ಮಾರ್ಚ್ 21ರಂದು ಅಭಿವೃದ್ಧಿ ಕೆಲಸಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು.
ನಗರಸಭೆಯ ₹24 ಲಕ್ಷ ಹಾಗೂ 15ನೇ ಹಣಕಾಸಿನ ಉಳಿತಾಯ ಅನುದಾನ ₹16 ಲಕ್ಷ ಸೇರಿದಂತೆ ಒಟ್ಟು ₹40 ಲಕ್ಷ ವೆಚ್ಚದಲ್ಲಿ ಈ ಕಾಮಗಾರಿ ಜರುಗಲಿದೆ.
1857ರ ಪ್ರಥಮ ಸ್ವತಂತ್ರ ಸಂಗ್ರಾಮದ ಸಮಯದಲ್ಲಿ ಮುಂಡರಗಿ ಭೀಮರಾಯರು ಮತ್ತು ಹಮ್ಮಗಿ ಕೆಂಚನಗೌಡರು ಕೊಪ್ಪಳ ಕೋಟೆಯಲ್ಲಿ ಹೋರಾಡಿ ವೀರ ಮರಣ ಹೊಂದಿದ್ದರು. ಅದರ ನೆನಪಿಗಾಗಿ ಸರ್ಕಲ್ ನಿರ್ಮಿಸಲಾಗಿತ್ತು. ಸೋಮವಾರ ಸರ್ಕಲ್ನ ಒಂದೊಂದೇ ಕಲ್ಲುಗಳನ್ನು ಬೇರೆಡೆ ಸ್ಥಳಾಂತರಿಸುವ ಕೆಲಸವನ್ನು ಆರಂಭಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.