ಕೊಪ್ಪಳ: ‘ರೈತರ ಹಿತ ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಕೂಡಲೇ ವಜಾ ಮಾಡಬೇಕು’ ಎಂದು ಜೆಡಿಎಸ್ ನಾಯಕರು ಆಗ್ರಹಿಸಿದರು.
ಸಕಾಲದಲ್ಲಿ ರೈತರಿಗೆ ರಸಗೊಬ್ಬರ ಪೂರೈಸುವಲ್ಲಿ ವಿಫಲವಾಗಿರುವ ಸರ್ಕಾರದ ವಿರುದ್ಧ ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದ ಮುಖಂಡರು ‘ರಾಜ್ಯದಲ್ಲಿ ಎರಡು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಲಂಚಗುಳಿತನ, ದುರಾಡಳಿತ ಮತ್ತು ವೈಫಲ್ಯತೆಯಿಂದ ಜನತೆ ಬಸವಳಿದಿದ್ದಾರೆ. ರಾಜ್ಯದಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರಿನಲ್ಲಿ ಉತ್ತಮ ಮಳೆ ಬಿದ್ದು ರಾಜ್ಯದ ರೈತರು ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ. ರಸಗೊಬ್ಬರವನ್ನು ಪೂರೈಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಆರೋಪಿಸಿದರು.
ಪಕ್ಷದ ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ್ ಮಾತನಾಡಿ ‘ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 6.8 ಲಕ್ಷ ಟನ್ ರಸಗೊಬ್ಬರ ನಿಗದಿ ಮಾಡಿದ್ದು, ಈ ಪೈಕಿ ಕೇವಲ 5.27 ಲಕ್ಷ ಟನ್ ರಸ ಗೊಬ್ಬರ ನೀಡಿರುವುದಾಗಿ ರಾಜ್ಯ ಸರ್ಕಾರ ಆಪಾದನೆ ಮಾಡುತ್ತಿದೆ. ಆದರೆ, ಬಾಕಿಯಿರುವ 1.5 ಲಕ್ಷ ಟನ್ ರಸ ಗೊಬ್ಬರವನ್ನು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದರು.
ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಶರಣಪ್ಪ ಕುಂಬಾರ ಆಕ್ರೋಶ, ಮುಖಂಡರಾದ ಸಂಗಮೇಶ ಡಂಬಳ, ಈಶಪ್ಪ ಮಾದನೂರ, ಮೂರ್ತ್ಯಪ್ಪ ಹಿಟ್ನಾಳ, ಶರಣಪ್ಪ ಜಡಿ, ಬಸವರಾಜ ಗುಳಗುಳಿ, ಕರಿಯಪ್ಪ ಹಾಲವರ್ತಿ, ಸಿದ್ದರೆಡ್ಡಿ ಸಿಂದೋಗಿ, ಪ್ರವೀಣ ಇಟಗಿ, ಸೈಯದ್ ಮೊಹಮ್ಮದ್ ಹುಸೇನ, ಶರಣಪ್ಪ ಮರ್ಕಟ್, ಶಿವಕುಮಾರ್ ಏಣಿಗಿ, ಮೌನೇಶ ಕಿನ್ನಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.