ADVERTISEMENT

ನುಡಿದಂತೆ ನಡೆದ ಜನತಾ ಸರ್ಕಾರ- ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ

ಮುನಿರಾಬಾದ್ ತುಂಗಭದ್ರಾ ಜಲಾಶಯದಲ್ಲಿ ಜೆಡಿಎಸ್‌ನಿಂದ ಜನತಾ ಜಲಧಾರೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 4:18 IST
Last Updated 17 ಏಪ್ರಿಲ್ 2022, 4:18 IST
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ ತುಂಗಭದ್ರಾ ಜಲಾಶಯದಲ್ಲಿ ಹಮ್ಮಿಕೊಂಡಿದ್ದ ಜನತಾಜಲಧಾರೆ ಕಾರ್ಯಕ್ರಮದಲ್ಲಿ ಜೆಡಿಎಸ್‌ ಮುಖಂಡರು ಕುಂಭಕ್ಕೆ ನೀರು ತುಂಬುವ ಮೂಲಕ ನೀರಾವರಿ ಹೋರಾಟಕ್ಕೆ ಚಾಲನೆ ನೀಡಿದರು
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್‌ ತುಂಗಭದ್ರಾ ಜಲಾಶಯದಲ್ಲಿ ಹಮ್ಮಿಕೊಂಡಿದ್ದ ಜನತಾಜಲಧಾರೆ ಕಾರ್ಯಕ್ರಮದಲ್ಲಿ ಜೆಡಿಎಸ್‌ ಮುಖಂಡರು ಕುಂಭಕ್ಕೆ ನೀರು ತುಂಬುವ ಮೂಲಕ ನೀರಾವರಿ ಹೋರಾಟಕ್ಕೆ ಚಾಲನೆ ನೀಡಿದರು   

ಕೊಪ್ಪಳ: ರಾಜ್ಯದಲ್ಲಿ ಯಾವಾಗ, ಯಾವಾಗ ಜನತಾ ಸರ್ಕಾರ ಬಂದಿದೆಯೋ ಆಗ ಅಭಿವೃದ್ಧಿ ಪರ್ವವೇ ನಡೆದಿದೆ ಎಂದು ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.

ತಾಲ್ಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯದಲ್ಲಿ ಜೆಡಿಎಸ್‌ನಿಂದ ಶನಿವಾರ ಹಮ್ಮಿಕೊಂಡಿದ್ದ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೀರಾವರಿಯ ಕನಸನ್ನು ಬಿತ್ತಿದವರು ಮಾಜಿ ಪ್ರಧಾನಿ ದೇವೇಗೌಡರು, ಗ್ರಾಮ ವಾಸ್ತವ್ಯದ ಮೂಲಕ ಬಡವರ ಮನೆ ಬಾಗಿಲಿಗೆ ಸರ್ಕಾರ ಕೊಂಡೊಯ್ದವರು ಮಾಜಿ ಸಿಎಂ ಕುಮಾರಸ್ವಾಮಿ, ರೈತರ ಸಾಲ ಮನ್ನಾ ಮಾಡುವ ಮೂಲಕ ಜನಪರ ಕಾಳಜಿಯನ್ನು ಜೆಡಿಎಸ್‌ ಪ್ರದರ್ಶಿಸಿದೆ ಎಂದರು.

ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಅಧಿಕವಾಗಿದ್ದರೂ ರೈತರಿಗೆ ನೀಡುತ್ತಿಲ್ಲ. ಉತ್ತಮ ಬೆಲೆ, ವಿದ್ಯುತ್, ನೀರು ನೀಡಿದಲ್ಲಿ ರೈತರೇ ನಿಮಗೆ ಸಾಲ ನೀಡುತ್ತಾರೆ. ಪ್ರಧಾನಿ ಮೋದಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂದರು. ಆದರೆ, ಕೇವಲ ಅದಾನಿ, ಅಂಬಾನಿ ವಿಕಾಸವಾಗುತ್ತಿದೆ. ರಾಜ್ಯದ ಜನರಿಗಾಗಿ ನಾವು ದುಡಿದಿದ್ದೇವೆ. ಹೀಗಾಗಿ ಗರ್ವದಿಂದ ಮತ ಕೇಳೋಣ ಎಂದರು.

ADVERTISEMENT

ಮಾಜಿ ಸಚಿವ ಎನ್.ಎಂ.ನಭಿಸಾಬ್ಮಾತನಾಡಿ,ದೇಶದ ಅನೇಕ ಕಡೆ ಪ್ರಾದೇಶಿಕ ಪಕ್ಷಗಳ ಆಡಳಿತವಿದ್ದು, ಉತ್ತಮ ಆಡಳಿತ ನೀಡುತ್ತಿವೆ. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಜನರಿಗೆ ದ್ರೋಹ ಬಗೆಯುತ್ತಿದ್ದು, ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಅನೇಕರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ, ಯಾರೊಬ್ಬರೂ ರೈತಪರ ಕಾಳಜಿ ಹೊಂದಿಲ್ಲ. ರೈತರ ಸಾಲಮನ್ನಾ ಮಾಡಿಲ್ಲ. ಎಚ್.ಡಿ.ಕುಮಾರಸ್ವಾಮಿ ಮಾತ್ರ ರೈತರ ಸಾಲ ಮನ್ನಾ ಮಾಡಿದ್ದಾರೆ. ಈಗ ತಮ್ಮ ಕನಸಿನಅಭಿವೃದ್ಧಿಯನ್ನು ರಾಜ್ಯದಲ್ಲಿ ಹರಿ ಬಿಟ್ಟಿದ್ದಾರೆ ಎಂದರು.

ಜೆಡಿಎಸ್ ಮುಖಂಡ ವಿರೇಶ ಮಹಾಂತಯ್ಯನಮಠ ಮಾತನಾಡಿ,ಜನರಿಗೆ ಕುಡಿಯುವ ನೀರು ಹಾಗೂ ರೈತರ ಬೆಳೆಗಳಿಗೆ ನೀರು ಕೊಡುವ ವಾಗ್ದಾನ ಮಾಡಿದ್ದಾರೆ. ಜೆಡಿಎಸ್‌ಗೆ ಪೂರ್ಣ ಪ್ರಮಾಣದ ಅಧಿಕಾರ ಬಂದರೆ ಖಂಡಿತ ಕೊಟ್ಟ ಮಾತು ಈಡೇರಿಸುತ್ತಾರೆ. ಅದಕ್ಕೆ ಜನರು ಸಹಕರಿಸಬೇಕು ಎಂದರು.

ಕೊಪ್ಪಳ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಮಾತನಾಡಿ,ನಿಷ್ಠೆಯಿಂದ ಕೆಲಸ ಮಾಡುವವರಿಗೆ ಎಲ್ಲರೂ ಬೆಂಬಲಿಸಬೇಕು. ಜಾತಿ, ಧರ್ಮ ಆಧಾರದಲ್ಲಿ ಜನರನ್ನು ಒಡೆಯುವವರಿಗೆ ಬರೆ ಹಾಕಿ. ರಾಜ್ಯದ ಹದಿನೈದು ಜಿಲ್ಲೆಗಳಿಂದ ಯಾತ್ರೆ ಆರಂಭವಾಗಲಿದೆ ಎಂದರು.

ಕೊಟ್ಟೂರುವಿಜಯ ಪ್ರಭುದೇವರು ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಶಿವಶಂಕರಪ್ಪ, ವಿಜಯನಗರ ಜಿಲ್ಲಾ ಅಧ್ಯಕ್ಷ ಕೊಟ್ರೇಶ್, ಮಹಾಂತೇಶ ಪಾಟೀಲ್ ಅತನೂರು, ಅಶೋಕ ಉಮಲೂಟಿ, ಮಲ್ಲನಗೌಡ ಕೋನನಗೌಡ, ಪಾಡಗುತ್ತಿ ಅಖ್ತರ್ ಸಾಬ್, ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಜೆಡಿಎಸ್ ಮುಖಂಡರುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.