ADVERTISEMENT

ಕುಕನೂರು | ಅಡ್ಡಡ್ಡ ಮಳೆ ಬಂದು ಜೋಕುಮಾರ...

ಜೋಕುಮಾರ ಸ್ವಾಮಿಯನ್ನು ಪೂಜಿಸಿದರೆ, ಮಳೆ-ಬೆಳೆ ಸಮೃದ್ಧಿಯಾಗಿ ಆಗುತ್ತದೆ ಎಂಬ ನಂಬಿಕೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 5:53 IST
Last Updated 8 ಸೆಪ್ಟೆಂಬರ್ 2025, 5:53 IST
ಕುಕನೂರು ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಜೋಕುಮಾರ ಸ್ವಾಮಿಯ ಹೊತ್ತ ಮಹಿಳೆಯರು
ಕುಕನೂರು ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಜೋಕುಮಾರ ಸ್ವಾಮಿಯ ಹೊತ್ತ ಮಹಿಳೆಯರು   

ಕುಕನೂರು: ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡಗಳೆಲ್ಲ ಹೈನಾಗಿ ಜೋಕುಮಾರ, ಜೋಕುಮಾರ... ಜೋಕುಮಾರ... ಮಡಿವಾಳ ಕೇರಿ ಹೊಕ್ಕಾನ ಜೋಕುಮಾರ... ಮುಡಿತುಂಬಾ ಹೂವ ಮುಡಿದಂತ ಚೆಲುವಿ ತನ್ನ ಮಡಿಯಂದಾ ಜೋಕುಮಾರ...

ಹೀಗೆ ತಮ್ಮ ಗಾನಕಂಠದಿಂದ ಸುಶ್ರಾವ್ಯವಾಗಿ ಹಾಡುತ್ತ ಜೋಕುಮಾರರನ್ನು ಆರಾಧಿಸುವ ಜನಪದಿಯರ ಹಬ್ಬ ಹಳ್ಳಿಗಳಲ್ಲಿ ಆರಂಭವಾಗಿದೆ.

ಜನಪದಿಯ ಸಂಸ್ಕೃತಿಯ ವಿಶಿಷ್ಟ ಆಚರಣೆ ಜೋಕುಮಾರಸ್ವಾಮಿ ಹಬ್ಬ. ಜೋಕುಮಾರನನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿದರೆ, ಮಳೆ-ಬೆಳೆ ಸಮೃದ್ಧಿಯಾಗಿ ಆಗುತ್ತದೆ ಎಂಬ ನಂಬಿಕೆ ಕೃಷಿ ಪರಂಪರೆಯಲ್ಲಿ ಹಾಸುಹೊಕ್ಕಿದೆ. ಗಣೇಶ ಶಿಷ್ಟ ಸಂಸ್ಕೃತಿಯ ವಾರಸುದಾರನಾದರೆ, ಜೋಕುಮಾರಸ್ವಾಮಿ ಜಾನಪದ ಸಂಸ್ಕೃತಿಯ ಪ್ರತೀಕ.

ADVERTISEMENT

ಒಂದು ವಾರಗಳ ಕಾಲ, ಕಾಯಿ-ಕಡುಬಿನ ಭರ್ಜರಿ ಭೋರಿ ಭೋಜನ ಸವಿದ ಗಣೇಶ, ಭೂಲೋಕದಲ್ಲಿ ಎಲ್ಲವೂ ಸೌಖ್ಯವಾಗಿದೆ ಎಂದು ತನ್ನ ತಂದೆ-ತಾಯಿ;ಶಿವ-ಪಾರ್ವತಿಗೆ ವರದಿ ಒಪ್ಪಿಸಿದರೆ, ಜಾನಪದ ಸಂಸ್ಕೃತಿಯ ವಾರಸುದಾರ ಜೋಕುಮಾರ ಸ್ವಾಮಿ ‘ಭೂಲೋಕದಲ್ಲಿ ಮಳೆ ಇಲ್ಲದೆ, ನರಮನುಷ್ಯ ಸಂಕಷ್ಟದಲ್ಲಿದ್ದಾನೆ. ಹನಿನೀರಿಗಾಗಿ ಪ್ರಾಣಿ-ಪಕ್ಷಿಗಳು ಪರಿತಪಿಸುತ್ತಿವೆ. ಮಳೆ ಸುರಿಯದೇ ಹೋದರೆ ಭೂಲೋಕ ನರಕಕೂಪವಾಗುತ್ತದೆ ಎಂದು ಜನರ ಕಷ್ಟಕಾರ್ಪಣ್ಯಗಳ ವರದಿ ಒಪ್ಪಿಸಿ ಮಳೆಗಾಗಿ ವಿನಂತಿಸುತ್ತಾನೆ ಎಂಬ ನಂಬಿಕೆ ಇದೆ.

ಜೋಕುಮಾರ ಗಂಗಾಮತ ಸಮುದಾಯದ ಮನೆಯಲ್ಲಿಯೇ ಜನ್ಮ ತಾಳುತ್ತಾನೆ. ಬಾರಿಕರ ಹನುಮಕ್ಕ, ಗಂಗಮ್ಮ ಗಿರಿಜಮ್ಮ, ಪಾರ್ವತಿ, ಕಮಲಮ್ಮ, ದೇವಮ್ಮ ಹಾಗೂ ಇತರರು ಜೋಕುಮಾರನನ್ನು ತಲೆ ಮೇಲೆ ಹೊತ್ತು ಹಾಡು ಹಾಡುತ್ತ ಕುಕನೂರು ಹೋಬಳಿಯಲ್ಲಿನ ಊರೂರು ಸುತ್ತುತ್ತಾರೆ.

ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಜೋಕುಮಾರ ಹುಟ್ಟುತ್ತಾನೆ. ಮಣ್ಣಿನಿಂದ ತಯಾರಿಸಲಾದ ಮೂರ್ತಿಗೆ ಬೇವಿನ ಎಸಳುಗಳ ಉಡುಗೆಯೊಂದಿಗೆ ವಿವಿಧ ಪುಷ್ಪಗಳಿಂದ ಅಲಂಕರ ಮಾಡಲಾಗುತ್ತದೆ. ಅಲಂಕೃತ ಮೂರ್ತಿಯನ್ನು ಮಹಿಳೆಯರು ಬುಟ್ಟಿಯಲ್ಲಿಟ್ಟುಕೊಂಡು ಆತನಿಗೆ ಸಂಬಂಧಿಸಿದ ಕತೆ-ಹಾಡುಗಳನ್ನು ಹಾಡುತ್ತ ಸಂಚರಿಸುತ್ತಾರೆ.

ಮನೆಮನೆಗೆ ತೆರಳಿದಾಗ ಭಕ್ತರು ನೀಡುವ ಜೋಳಕ್ಕೆ ಪ್ರತಿಯಾಗಿ ಜೋಕುಮಾರನ ಅರ್ಚಕರು ಕರಿಮಸಿ ಬೆರೆತ ಬೇವಿನ ಸೊಪ್ಪು, ಜೋಳ ಇತ್ಯಾದಿಗಳನ್ನು ಪ್ರತಿಯಾಗಿ ಕೊಡುತ್ತಾರೆ. ಇದನ್ನು ಮಾರನೇ ದಿನ ಬೆಳಗಿನ ಜಾವ ಜೋಳದ ಪೈರಿಗೆ ಮಜ್ಜಿಗೆಯಲ್ಲಿ ಬೆರಸಿಕೊಂಡು ಚರಗ ಹೊಡೆಯುತ್ತಾರೆ. ಹೀಗೆ ಹೊಡೆಯುವುದರಿಂದ ಬೆಳೆ ಸಮೃದ್ಧಿಯಾಗುತ್ತದೆ ಎಂಬ ನಂಬಿಕೆ ಗ್ರಾಮೀಣರದ್ದು.

ಏಳು ದಿನಗಳ ಸಂಪ್ರದಾಯಿಕ ವಿಧಿ-ವಿಧಾನಗಳ ನಂತರ, ಜೋಕುಮಾರನಿಗೆ ಚೂರಿ ಹಾಕುತ್ತಾರೆ. ನಂತರ ಬಟ್ಟೆ ತೊಳೆಯುವ ಅಗಸರ ಬಂಡೆಯ ಅಡಿಯಲ್ಲಿ ಆತನ ಶವ ಹೂತು ಬರುತ್ತಾರೆ. ಏಳು ದಿನಗಳ ಕಾಲ ಊರೂರು ಅಲೆದ ಸಂದರ್ಭದಲ್ಲಿ ಸಂಗ್ರಹವಾದ ದವಸ-ಧಾನ್ಯಗಳಲ್ಲಿ ಅಡುಗೆ ತಯಾರಿಸಿ ಸಾಮೂಹಿಕ ಭೋಜನ ಮಾಡುತ್ತಾರೆ.

ಜೋಕುಮಾರಸ್ವಾಮಿ ಜಾನಪದ ಸಂಸ್ಕೃತಿಯ ಪ್ರತೀಕ ಏಳು ದಿನ ನಡೆಯುವ ‌ಸಂಪ್ರದಾಯಿಕ ವಿಧಿ-ವಿಧಾನ ಸಂಗ್ರಹವಾದ ದವಸ-ಧಾನ್ಯಗಳಲ್ಲಿ ಅಡುಗೆ ತಯಾರಿಕೆ

ಜೋಕುಮಾರ ಸ್ವಾಮಿ ಹಬ್ಬವನ್ನು 6 ದಿನ 7 ಊರುಗಳನ್ನು ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕೆಂಬುದು ಆರಾಧಕರು ಹಾಕಿಕೊಂಡಿರುವ ಸಂಪ್ರದಾಯವಿದೆ
ಹನುಮಕ್ಕ ಇಟಗಿ ಗ್ರಾಮದ ಮಹಿಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.