ಕೊಪ್ಪಳ: ಉಜಿರೆಯಲ್ಲಿ ನಡೆದ ವರದಿಗಾರ ಹರೀಶ್ ಹಾಗೂ ಕ್ಯಾಮರಾಮ್ಯಾನ್ ನವೀನ್ ಪೂಜಾರಿ ಮೇಲಿನ ಹಲ್ಲೆ ಖಂಡಿಸಿ ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಪತ್ರಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಉಜರೆಯ ಬೆನಕ ಆಸ್ಪತ್ರೆಗೆ ವರದಿ ಮಾಡಲು ತೆರಳಿದ್ದ ವೇಳೆ ಈ ಹಲ್ಲೆ ನಡೆದಿದ್ದು, ಎಫ್ಐಆರ್ ದಾಖಲಾಗಿದೆ.
‘ಕರ್ತವ್ಯನಿರತ ಪತ್ರಕರ್ತರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಸಾಮಾಜಿಕ ವ್ಯವಸ್ಥೆಯಲ್ಲಿ ಜನರ ಧ್ವನಿಯಾಗಿ ಮಾಧ್ಯಮಗಳು ಸದಾಕಾಲ ಕೆಲಸ ಮಾಡುತ್ತಿವೆ. ಅಂತಹ ಕರ್ತವ್ಯದ ವೇಳೆ ಹಲ್ಲೆ, ದೌರ್ಜನ್ಯ, ಬೆದರಿಕೆ ತರವಲ್ಲ’ ಎಂದು ಕಪ್ಪು ರಿಬ್ಬನ್ ಧರಿಸಿ ಪ್ರತಿಭಟಿಸಿ ಪತ್ರಕರ್ತರು ಹೇಳಿದರು.
‘ರಾಜ್ಯಾದ್ಯಂತ ವೃತ್ತಿ ನಿರತ ಪತ್ರಕರ್ತರ ಮೇಲೆ ಇತ್ತೀಚೆಗಿನ ವರ್ಷಗಳಲ್ಲಿ ಹಲ್ಲೆ, ಬೆದರಿಕೆ ಹಾಕುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರ ಪತ್ರಕರ್ತರ ಹಿತ ರಕ್ಷಣೆಗಾಗಿ ವಿಶೇಷ ಕಾನೂನು ಜಾರಿ ಮಾಡಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಗ್ರೇಡ್–2 ತಹಶೀಲ್ದಾರ್ ಗವಿಸಿದ್ದಪ್ಪ ಮಣ್ಣೂರ್ ಅವರಿಗೆ ಸಲ್ಲಿಸಲಾಯಿತು.
ಕ್ಲಬ್ ಅಧ್ಯಕ್ಷ ರವೀಂದ್ರ ವಿ.ಕೆ., ಕಾರ್ಯದರ್ಶಿ ದತ್ತು ಕಮ್ಮಾರ, ಖಜಾಂಚಿ ಅನಿಲ್ ಬಾಚನಹಳ್ಳಿ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.