ADVERTISEMENT

ಕೆ.ಕಲ್ಯಾಣ ಕುಟುಂಬದಲ್ಲಿ ಕಲಹ: ಆರೋಪಿ ಗಂಗಾ ಕುಲಕರ್ಣಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 10:27 IST
Last Updated 29 ಅಕ್ಟೋಬರ್ 2020, 10:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೊಪ್ಪಳ: ಚಿತ್ರಸಾಹಿತಿ ಕೆ. ಕಲ್ಯಾಣ ದಾಂಪತ್ಯದಲ್ಲಿ ಬಿರುಕು ಮೂಡಿಸಿದ್ದ ಆರೋಪ ಹೊತ್ತಿದ್ದ ಗಂಗಾ ಕುಲಕರ್ಣಿ ಕೊಪ್ಪಳದ ಕುಷ್ಟಗಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಷ್ಟಗಿ ನ್ಯಾಯಾಲಯದ ಆವರಣದಲ್ಲಿ ವಿಷ ಸೇವಿಸಿ ಗಂಗಾ ಕುಲಕರ್ಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾ ಕುಲಕರ್ಣಿ ಇಂದು ವಿಚಾರಣೆಗೆ ಕುಷ್ಟಗಿ ನ್ಯಾಯಾಲಯಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ನ್ಯಾಯಾಲಯದ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಚಲನಚಿತ್ರ ಸಾಹಿತಿ ಕೆ. ಕಲ್ಯಾಣ್‌ ಕೆಲ ದಿನಗಳ ಹಿಂದೆ ಚಲನಚಿತ್ರ ಅವರ ಪತ್ನಿಯ ಜೀವನದ ಜೊತೆ ಚೆಲ್ಲಾಟವಾಡಿ ಪತಿ ಪತ್ನಿಯರಿಬ್ಬರೂ ದೂರಾಗುವಲ್ಲಿ ಪ್ರಮುಖ ರೂವಾರಿಯಾಗಿದ್ದರು. ಅಲ್ಲದೆ ಅವರ ಆಸ್ತಿಯನ್ನು ಲಪಾಟಿಸಿದ್ದರು ಎಂದು ಆರೋಪ ಕೇಳಿಬಂದಿತ್ತು

ಗಂಗಾ ಕುಲಕರ್ಣಿ ಕುಷ್ಟಗಿ ತಾಲೂಕಿನಾದ್ಯಂತ ವಿವಿಧ ನಿರುದ್ಯೋಗಿ ಯುವಕರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಎತ್ತುವಳಿ ಮಾಡಿ, ತಲೆಮರೆಸಿಕೊಂಡಿದ್ದರು. ಸರ್ಕಾರಿ ನೌಕರಿ ಕೊಡಿಸುವುದಾಗಿ ಅನೇಕ ಯುವಕರಿಗೆ ಮೋಸ ಮಾಡಿದ್ದಾರೆ ಎಂಬ ಆರೋಪದ ಮೇಲೆ ಇಲ್ಲಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಲ್ಲದೆ, ಹಣ ಕಳೆದುಕೊಂಡವರು ಗಂಗಾಗೆ ಹಣ ನೀಡುವಂತೆ ಒತ್ತಾಯಿಸಿದ್ದರಲ್ಲದೆ, ಸ್ಥಳೀಯ ಪೊಲೀಸರ ನೆರವಿನಿಂದ ಒತ್ತಡ ಹೇರಿದ್ದರು ಎನ್ನಲಾಗಿದೆ.

ಅಲ್ಲದೆ ಇವರ ಮೇಲೆ ಅನೇಕ ಪ್ರಕರಣಗಳು ದಾಖಲಾಗಿದ್ದವು. ಆ ಪ್ರಕರಣಕ್ಕೆ ಸಂಬಂದಿಸಿದಂತೆ ನ 3 ನವೆಂಬರ್ ರಂದು ಹಾಜರಾಗಬೇಕಾಗಿದ್ದ ಕಾರಣ ಕುಷ್ಟಗಿ ನಗರದ ನ್ಯಾಯಾಲಯಕ್ಕೆ ವಕೀಲರ ಭೇಟಿಗಾಗಿ ಬಂದಿದ್ದರು ಎನ್ನಲಾಗುತ್ತಿದೆ.

ಈ ವೇಳೆ ಕೋಟ್೯ ಆವರಣದಲ್ಲಿಯೇ ವಿಷ ಸೇವಿಸಿ ಕುಸಿದು ಬಿದ್ದರು. ತಕ್ಷಣ ಸ್ಥಳೀಯರ ಸಹಕಾರದಿಂದ ಪೋಲಿಸರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ದಾಖಲಿಸಿದ್ದರು.

ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ಡೆತ್ ನೋಟ್ ಪತ್ತೆ

ಕುಷ್ಟಗಿ ನ್ಯಾಯಾಲಯದ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಗಂಗಾ ಕುಲಕರ್ಣಿ ಅವರದ್ದು ಎನ್ನಲಾದ ಎರಡು ಪುಟಗಳ ಡೆತ್ ನೋಟ್ ಪತ್ತೆಯಾಗಿದೆ.

ಗಂಗಾ ಕುಲಕರ್ಣಿ ಡೆತ್ ನೋಟ್​ ಮರಾಠಿ ಭಾಷೆಯಲ್ಲಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನನ್ನ ಮೇಲೆ ಹಲವಾರು ಕೇಸುಗಳಿವೆ. ನನಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಕರ್ಮಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂಬುದು ಸೇರಿದಂತೆ ಇನ್ನಿತರ ವಿಚಾರಗಳನ್ನು ಆಕೆ ಪ್ರಸ್ತಾಪಿಸಿದ್ದಾರೆ.

ಕಲ್ಯಾಣ ನೀಡಿದ್ದ ದೂರು

ನನ್ನ ಪತ್ನಿ, ಅತ್ತೆ ಹಾಗೂ ಮಾವನಿಗೆ ಗಂಗಾ ಕುಲಕರ್ಣಿ ವಂಚಿಸಿದ್ದಾರೆ ಎಂದು ಆರೋಪಿಸಿ ಕೆ. ಕಲ್ಯಾಣ್ ಅವರು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಸೆ.30ರಂದು ದೂರು ನೀಡಿದ್ದರು. ಗಂಗಾ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು ಎನ್ನಲಾಗಿದೆ.

ಕುಷ್ಟಗಿಯಲ್ಲಿ ವಂಚನೆ: ತಾಲ್ಲೂಕಿನ ಕ್ಯಾದಿಗುಪ್ಪಾ ಗ್ರಾಮದ ಸಂತೋಷ್ ಕುಲಕರ್ಣಿ ಎಂಬುವರಿಗೆ ಗಂಗಾ 3 ಲಕ್ಷ ವಂಚನೆ ಮಾಡಿದ್ದಳು. ನೌಕರಿ ಕೊಡಿಸುವುದಾಗಿ ಹೇಳಿ ಹಣ ಪಡೆದಿದ್ದರು ಎನ್ನಲಾಗಿದೆ. ಈ ಕುರಿತು 2016 ರಲ್ಲಿ ದೂರು ದಾಖಲಾಗಿತ್ತು.

ನಂತರ ಬಂಧನಕ್ಕೆ ಒಳಗಾಗಿ ಜೈಲು ಅನುಭವಿಸಿ, ಜಾಮೀನು ಮೇಲೆ ಬಿಡುಗಡೆ ಆಗಿದ್ದರು. ತನ್ನ ಇಬ್ಬರು ಮಕ್ಕಳ ಭವಿಷ್ಯದ ಸಂಬಂಧ ಜ್ಯೋತಿ ಕುಲಕರ್ಣಿ ಗಂಗಾ ಕುಲಕರ್ಣಿ ಎಂದು ಹೆಸರು ಬದಲಾಯಿಸಿರುವುದಾಗಿ ಡೆತ್ ನೋಟ್ ನಲ್ಲಿ ಬರೆದುಕೊಂಡಿದ್ದಾರೆ.

ಈ ಕುರಿತು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು. ಪೊಲೀಸರಿಗೆ ಸಿಗದೇ ತಲೆ ಮರೆಸಿಕೊಂಡು ಬೆಳಗಾವಿಯಲ್ಲಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ.

ಬೆಳಗಾವಿಯಲ್ಲಿ ಕೆ.ಕಲ್ಯಾಣ ಪತ್ನಿಯ ಮನೆಯಲ್ಲಿ ಕೆಲಸಕ್ಕೆ ಸೇರಿ ಶಿವಾನಂದ ವಾಲಿ ಎಂಬಾತನ ಜೊತೆಗೂಡಿ ಮೋಸ ಮಾಡಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.